ಅಕುಲ್ ಬಾಲಾಜಿ, ಸಂತೋಷ್ಕುಮಾರ್, ಆರ್.ವಿ ಯುವರಾಜ್ಗೆ ಡ್ರಗ್ಸ್ ಸಂಕಷ್ಟ..!
ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ನಿರೂಪಕ ಅಕುಲ್ ಬಾಲಾಜಿ, ನಟ ಸಂತೋಷ್ಕುಮಾರ್ ಹಾಗೂ ಕಾಂಗ್ರೆಸ್ ಮಾಜಿ ಕಾರ್ಪೋರೇಟರ್ ಆರ್.ವಿ ಯುವರಾಜ್ಗೂ ಸಿಸಿಬಿ ನೋಟಿಸ್ ಜಾರಿ ಮಾಡಿದ್ದು, ಇಂದು ಸಿಸಿಬಿ ವಿಚಾರಣೆಗೆ ಹಾಜರಾಗಲಿದ್ದರೆ.
ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ಶುಕ್ರವಾರ ನೋಟಿಸ್ ನೀಡಿದ್ದು, ಸ್ಯಾಂಡಲ್ವುಡ್ನಲ್ಲಿ ಮತ್ತೆ ತಲ್ಲಣ ಸೃಷ್ಟಿಯಾಗಿದೆ.
ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳ ಮೂಲಕ ಮನೆಮಾತಾಗಿರುವ ಅಕುಲ್ ಬಾಲಾಜಿಗೆ ಸಿಸಿಬಿ ನೋಟಿಸ್ ನೀಡಲಾಗಿದೆ. ಸಿಸಿಬಿ ನೋಟಿಸ್ ತಲುಪಿದ್ದು, ನಾನು ಹೈದರಾಬಾದ್ನಲ್ಲಿದ್ದೇನೆ. ವಿಚಾರಣೆಗೆ ಹಾಜರಾಗ್ತೇನೆ ಎಂದು ಅಕುಲ್ ಬಾಲಾಜಿ ಹೇಳಿಕೊಂಡಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಲಗುಮೇನಹಳ್ಳಿ ಗ್ರಾಮದಲ್ಲಿ ಅಕುಲ್ ಒಡೆತನದ ಸನ್ಶೈನ್ ರೆಸಾರ್ಟ್ ಇದೆ. ಡ್ರಗ್ಸ್ ಪೆಡ್ಲರ್ ವಿರೇನ್ ಖನ್ನಾಗೆ ಈ ರೆಸಾರ್ಟ್ನಲ್ಲಿ ಪಾರ್ಟಿ ಮಾಡಲು 3 ಬಾರಿ ಬಾಡಿಗೆಗೆ ನೀಡಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಕುಲ್ ಬಾಲಾಜಿಗೆ ನೋಟಿಸ್ ನೀಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ ದೇವರಾಜ್ ಪುತ್ರ ಹಾಗೂ ಸುಧಾಮನಗರ ಮಾಜಿ ಕಾರ್ಪೋರೇಟರ್ ಆರ್.ವಿ ಯುವರಾಜ್ಗೂ ಸಿಸಿಬಿ ಪೊಲೀಸರು ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ನೋಟಿಸ್ ನೀಡಿದ್ದಾರೆ.
ಈ ಹಿಂದೆ ವಿದ್ವತ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ವಿ ಯುವರಾಜ್ರನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಸಿ ಹೇಳಿಕೆ ಪಡೆದು ಕಳಿಸಿದ್ದರು. ಇದೀಗ ಹಳೆ ಕೇಸ್ಗೆ ಮರು ಜೀವ ನೀಡುವ ಸಾಧ್ಯತೆ ಕಂಡು ಬರುತ್ತಿದ್ದು, ಸಿಸಿಬಿ ಪೊಲೀಸರ ನಡೆಯತ್ತ ಕುತೂಹಲ ಮೂಡಿಸಿದೆ.
ಈ ನಡುವೆ, ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಹಾಗೂ ಬಿಗ್ಬಾಸ್ ಸ್ಪರ್ಧಿ ಸಂತೋಷ್ ಕುಮಾರ್ಗೂ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಸಿಸಿಬಿ ನೋಟಿಸ್ ತಲುಪಿದ್ದು, ವಿಚಾರಣೆಗೆ ಹಾಜರಾಗುವುದಾಗಿ ಸಂತೋಷ್ ಕುಮಾರ್ ತಿಳಿಸಿದ್ದಾರೆ. `ನೂರು ಜನ್ಮಕೂ’, `ಇಷ್ಟ’ ಸೇರಿದಂತೆ 3 ಚಿತ್ರಗಳಲ್ಲಿ ಸಂತೋಷ್ ಕುಮಾರ್ ನಟಿಸಿದ್ದಾರೆ. ಸಂಜನಾ ಬರ್ತ್ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದು ಸಂತೋಷ್ಗೆ ಮುಳುವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.