ಆನೇಕಲ್ : ಬೆಂಗಳೂರು ನಗರ ಜಿಲ್ಲೆ ಆನೇಕಲ್ ನಲ್ಲಿರುವ ರಾಮಕೃಷ್ಣ ಶಾಲಾ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ “ವೆಂಕಟರಮಯ್ಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ” ಹೆಸರನ್ನಿಡಲು ಕೃಷಿ ಸಚಿವ ಬಿ.ಸಿ.ಪಾಟೀಲರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಆನೇಕಲ್ ಜಿಲ್ಲಾ ಕೃಷಿ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಇಲ್ಲಿನ ಕೃಷಿಕ ತೋಟಗಾರಿಕಾ ಅಧಿಕಾರಿಗಳ ಜೊತೆ ಚರ್ಚಿಸಿ ಈ ಹೆಸರು ಇಡಲು ನಿರ್ಧಿಸಿರುವುದಾಗಿ ಹೇಳಿದ್ದಾರೆ.
ರಾಮಕೃಷ್ಣ ಮಠದ ಭಕ್ತರಾಗಿರುವ ಬೆಂಗಳೂರಿನ ಗಾಣಿಗಾಪುರ ಮೂಲದ ವೆಂಕಟರಾಮಯ್ಯ ವೃತ್ತಿಯಲ್ಲಿ ವಕೀಲರಾಗಿದ್ದರೂ ಸಹ 1924 ರಲ್ಲಿ ಕೃಷಿ ಮತ್ತು ರೈತರ ಮೇಲಿನ ಕಾಳಜಿಯಿಂದ ತಮ್ಮ ಭೂಮಿಯನ್ನು ರೈತರಿಗಾಗಿ ಕೃಷಿ ತರಬೇತಿ ನೀಡಲು ದಾನ ಮಾಡಿದ್ದರು. ಇವರ ನೆನಪಿಗಾಗಿ ಕೃಷಿ ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ರೈತರಿಗಾಗಿ ಕೃಷಿಗಾಗಿ ಸೇವೆ ಸಲ್ಲಿಸಿ ಅಮೂಲ್ಯ ಜಮೀನನ್ನು ತರಬೇತಿ ಕೇಂದ್ರಕ್ಕೆ ನೀಡಿರುವ ಇವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರೂ ಸಹ ತರಬೇತಿ ಕೇಂದ್ರಕ್ಕೆ “ವೆಂಕಟರಮಯ್ಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ” ಎಂದು ಹೆಸರಿಡುವುದು ಸೂಕ್ತವೆನಿಸುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಬಿ.ಸಿ.ಪಾಟೀಲರು ಸ್ಪಷ್ಟಪಡಿಸಿದರು.