ಹೆಜ್ಜೆ ಗೆಜ್ಜೆಯ ನಾದಕ್ಕೆ ಸಂಗೀತದ ಇಂಪು, ತಾಳ ಮೇಳಗಳ ಸಮಾನ ಮೇಳೈಸುವಿಕೆ… ರಂಗಪ್ರವೇಶಕ್ಕೆ ಸಿದ್ಧವಾದ ರಂಗದ ತುಂಬೆಲ್ಲಾ ಭಕ್ತಿಯ ಪರವಶತೆಯ ತಂಪು… ಇಂಥದ್ದೊಂದು ಸಂದರ್ಭ ನಿರ್ಮಾಣವಾಗಿದ್ದು ಕೋರಮಂಗಲದ ಪ್ರಭಾತ್ ಕಲಾದ್ವಾರಕದಲ್ಲಿ ನಡೆದ ವಿದುಷಿ ರಕ್ಷಾ ರಾಮ್ ಕುಡ್ವ ಅವರ ಶಿಷ್ಯರಾದ ಕುಮಾರಿ ಶೃತಿ ವೇಟ್ರಿವೇಲ್, ಕುಮಾರಿ ಆಯುಷಿ ಕೊಂಡಾಪುರ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ…
ಪ್ರೆಸಿಡೆನ್ಸಿ ಸ್ಕೂಲ್ ನಲ್ಲಿ ೯ನೇ ತರಗತಿಯಲ್ಲಿ ಓದುತ್ತಿರುವ ಶೃತಿ, ೫ನೇ ವಯಸ್ಸಿನಲ್ಲಿಯೇ ಭರತನಾಟ್ಯಕ್ಕೆ ಮನಸೋತವಳು. ಇದನ್ನು ಕಂಡ ವೇಟ್ರಿವೇಲ್ ದಂಪತಿ, ಶೃತಿಯನ್ನು ವಿದುಷಿ ಪ್ರಿಯದರ್ಶಿನಿ, ವಿದುಷಿ ಶಿಬಾನಿಯವರ ಬಳಿ ನೃತ್ಯಾಭ್ಯಾಸಕ್ಕೆ ಕಳಿಸಿದರು. ನಂತರದಲ್ಲಿ ವಿದುಷಿ ರಕ್ಷಾರಾಮ್ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿದ್ದಾರೆ. ಭರತನಾಟ್ಯವನ್ನು ತನ್ನ ದೇಹ, ಮನಸ್ಸು, ಆತ್ಮದ ಮಧ್ಯೆ ಸಂಪರ್ಕ ಸಾಧಿಸುವ ಸಾಧನವಾಗಿಸಿಕೊಂಡಿರುವ ಶೃತಿಗೆ ನೃತ್ಯವೇ ಜೀವಾಳ.
ಇನ್ನು ಆಯುಷಿ ಕೊಂಡಾಪುರ್ ಅವರು ವಿಬ್ಗ್ಯಾರ್ ಹೈ ನಲ್ಲಿ ೧೦ನೇ ತರಗತಿಯಲ್ಲಿ ಓದುತ್ತಿದ್ದಾರೆ… ಕಳೆದ ೮ ವರ್ಷಗಳಿಂದ ಭರತನಾಟ್ಯವನ್ನು ಆಭ್ಯಸಿಸುತ್ತಿರುವ ಆಯುಷಿ ಕೂಡ ಬಾಲ್ಯದಲ್ಲಿಯೇ ನೃತ್ಯಾಸಕ್ತಳು. ತನ್ನ ೭ನೇ ವಯಸ್ಸಿನಲ್ಲಿ ವಿದುಷಿ ಶ್ರೀಜಯಾ ನಾಯರ್ ಅವರ ಬಳಿ ಕಲಿಯಲಾರಂಭಿಸಿದ ಆಯುಷಿ, ಪ್ರಸ್ತುತ ವಿದುಷಿ ರಕ್ಷಾರಾಮ್ ಕುಡ್ವ ಅವರಲ್ಲಿ ಶಿಷ್ಯವೃತ್ತಿ ಮಾಡುತ್ತಿದ್ದಾರೆ. ನೃತ್ಯ ಮಾತ್ರವಲ್ಲದೇ ಚಿತ್ರಕಲೆ, ಸ್ಕೆಚಿಂಗ್, ಸಂಗೀತ, ಸ್ಕೇಟಿಂಗ್ ನಂತಹ ಹಲವು ಕ್ಷೇತ್ರಗಳಲ್ಲಿ ತನ್ನದೇ ಹೆಜ್ಜೆ ಗುರುತುಗಳನ್ನು ಮೂಡಿಸಿ ಹೆತ್ತವರಾದ ಅರವಿಂದ್ ದಂಪತಿಗಳಿಗೆ ಹೆಮ್ಮೆಯ ಗರಿ ಮೂಡಿಸಿದ್ದಾಳೆ ಆಯುಷಿ..
ಗುರು ವಿದುಷಿ ರಕ್ಷಾ ರಾಮ್ ಕುಡ್ವ
ಶಿವಮೊಗ್ಗದ ತೀರ್ಥಹಳ್ಳಿ ಸಮೀಪದ ಪುಟ್ಟ ಹಳ್ಳಿಯ ಹಿನ್ನೆಲೆ ಹೊಂದಿರುವ ವಿದುಷಿ ರಕ್ಷಾ ರಾಮ್ ಕುಡ್ವ, ಭರತನಾಟ್ಯವನ್ನೇ ಉಸಿರಾಗಿಸಿಕೊಂಡು, ತಮ್ಮ ಶಿಷ್ಯವೃಂದಕ್ಕೆ ಖಡಕ್ ಎಚ್ಚರಿಕೆಯೊಂದಿಗೆ ಪಾಠ ಹೇಳುವ ಸಮರ್ಥ ಗುರು. ಭರತನಾಟ್ಯದ ಜ್ಯುನಿಯರ್ ಹಂತದ ಶಿಕ್ಷಣವನ್ನು ಶಿವಮೊಗ್ಗದ ವಿದ್ವಾನ್ ಕೇಶವಕುಮಾರ್ ಪಿಳ್ಳೈ ಅವರ ಬಳಿ ಪಡೆದ ರಕ್ಷಾ ಅವರು, ನಂತರದಲ್ಲಿ ಹಲವು ನೃತ್ಯ ಗುರುಗಳ ಬಳಿ ಅಭ್ಯಸಿಸಿದರು. ತಮ್ಮ ವಿದ್ವತ್ ಶಿಕ್ಷಣವನ್ನು ಚೆನ್ನೈ ಕಲಾಕ್ಷೇತ್ರದ ವಿದ್ವಾನ್ ಹರಿಪದ್ಮನ್ ಮತ್ತು ವಿದುಷಿ ದಿವ್ಯಾ ಹರಿಪದ್ಮನ್ ಅವರ ಬಳಿ ಪಡೆದರು. ಬಳಿಕ ಮೋಹಿನಿಯಟ್ಟಂ ನೃತ್ಯವನ್ನು ವಿದುಷಿ ಉಷಾ ದಾತಾರ್ ಹಾಗೂ ವಿದುಷಿ ಕಲಾಮಂಡಲಮ್ ಶ್ರೀಜಯಾ ನಾಯರ್ ಅವರ ಬಳಿ ಪಡೆದರು. ಎಂಬಿಎ ಪದವೀಧರೆಯಾಗಿರುವ ರಕ್ಷಾ ಅವರು ದೇಶ ವಿದೇಶಗಳ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ ಹೆಚ್ಎಸ್ಆರ್ ಲೇ ಔಟ್ನಲ್ಲಿ ನೃತು ರೂಪಕ ಎಂಬ ಕಲಾ ಸಂಸ್ಥೆಯನ್ನು ಸ್ಥಾಪಿಸಿ ಭರತನಾಟ್ಯದ ಶಿಕ್ಷಣ ಬಯಸುವ ಹಲವು ವಿದ್ಯಾರ್ಥಿಗಳಿಗೆ ಸಮರ್ಥ ಗುರು ಎನಿಸಿದ್ದಾರೆ.
ರಂಗಪ್ರವೇಶ
ಭರತನಾಟ್ಯವನ್ನು ಅಭ್ಯಸಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ರಂಗಪ್ರವೇಶ ಎಂಬುದೊಂದು ಜೀವನದ ಮಹತ್ವದ ಘಟ್ಟ. ಅಪ್ಪಟ ಕಲಾವಿದರಾಗಿ ಪೂರ್ಣಪ್ರಮಾಣದ ನೃತ್ಯವನ್ನು ಪ್ರಸ್ತುತ ಪಡಿಸಲು ಮೊಟ್ಟಮೊದಲಿಗೆ ದೊರಕುವ ವೇದಿಕೆ ಎಂದರೂ ತಪ್ಪಿಲ್ಲ. ಅಂಥದ್ದೊಂದು ರಂಗಪ್ರವೇಶ ಕಾರ್ಯಕ್ರಮವನ್ನು ಶೃತಿ ಹಾಗೂ ಆಯುಷಿಯರು ಸಮರ್ಥವಾಗಿ ನಿರ್ವಹಿಸಿದ್ದಾರೆ. ವೇದಿಕೆಯಲ್ಲಿ ಅವರಿಗೆ ಪೂರಕವಾಗಿ ಗಾಯನದಲ್ಲಿ ವಿದ್ವಾನ್ ರೋಹಿತ್ ಭಟ್, ನಟುವಾಂಗದಲ್ಲಿ ವಿದುಷಿ ರಕ್ಷಾರಾಮ್ ಕುಡ್ವ, ಮೃದಂಗದಲ್ಲಿ ವಿದ್ವಾನ್ ವಿನೋದ್ ಶ್ಯಾಂ ಆನೂರು, ವೀಣೆಯಲ್ಲಿ ವಿದ್ವಾನ್ ಗೋಪಾಲ್ ವೆಂಕಟರಮಣ, ಕೊಳಲಿನಲ್ಲಿ ವಿದ್ವಾನ್ ವಿವೇಕ್ ವಿ ಕೃಷ್ಣ ಸಹಕರಿಸಿದರು. ಸಮರಸದ ನೃತ್ಯ ಪ್ರದರ್ಶನವನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ವಿದ್ವಾನ್ ಹರಿಪದ್ಮನ್, ವಿದುಷಿ ದಿವ್ಯಾ ಹರಿಪದ್ಮನ್, ವಿದುಷಿ ಬಿಂದು ನಾಯರ್ ಮುಕ್ತ ಕಂಠದಿಂದ ಶ್ಲಾಘಿಸಿದರು.
ಭಾರತದ ಮಕ್ಕಳು ಪಾಶ್ಚಾತ್ಯ ನೃತ್ಯವನ್ನು ಅಭ್ಯಸಿಸುವುದರ ಬದಲು ನಮ್ಮ ನೆಲದ ಕಲೆಯನ್ನು ಗೌರವಿಸಬೇಕು ಮತ್ತು ಅಭ್ಯಸಿಸಬೇಕು ಎಂದ ವಿಧುಷಿ ಬಿಂದು ನಾಯರ್ ಅವರ ಮಾತನ್ನು ಸಮರ್ಥಿಸಿದ ವಿದ್ವಾನ್ ಹರಿಪದ್ಮನ್ ದಂಪತಿಗಳು ಕಲೆ ನಿಂತ ನೀರಾಗಬಾರದು ನಿರಂತರ ಹರಿಯುವ ನದಿಯಾಗಬೇಕು ಎನ್ನುತ್ತಾ ನೃತು ರೂಪಕದಿಂದ ಇನ್ನೂ ಹೆಚ್ಚಿನ ರಂಗಪ್ರವೇಶ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.