ಮಂಡ್ಯ : ಕೊರೊನಾ ವಿರುದ್ಧ ಹೋರಾಡಲು ಪಕ್ಷ ಭೇದ ಮರೆತು ಕೆಲಸ ಮಾಡಬೇಕಿದ್ದ ಸಮಯವಿದು. ಆದರೆ ಸಕ್ಕರೆ ನಾಡು ಮಂಡ್ಯದಲ್ಲಿ ಕೊರೊನಾ ವಿಚಾರವಾಗಿ ನಡೆದ ಸಭೆಯಲ್ಲಿ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನಡುವೆ ವಾಗ್ವಾದ ಆಗಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿರುವ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹೊತ್ತಿನಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರದ ಶಾಸಕರು ಪಕ್ಷ ಭೇದ ಮರೆತು ಕೊರೊನಾ ನಿಯಂತ್ರಣ ಮಾಡಬೇಕಿತ್ತು. ಆದರೆ ಕೊರೊನಾ ವಿಚಾರದಲ್ಲಿ ಶಾಸಕರು ಮತ್ತು ಸಚಿವರು ಗಲಾಟೆ ಮಾಡಿಕೊಂಡಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಹಾಗೂ ಸ್ಥಳೀಯ ಜೆಡಿಎಸ್ ಶಾಸಕರಾದ ಸುರೇಶ್ ಗೌಡ, ಶ್ರೀಕಂಠೇಗೌಡ ಭಾಗಿಯಾಗಿದ್ದರು. ಸಭೆ ಪ್ರಾರಂಭವಾಗುತ್ತಿದಂತೆ ಜೆಡಿಎಸ್ ಶಾಸಕರು ಉಸ್ತುವಾರಿ ಸಚಿವರು ಮೇಲೆ ಮುಗಿಬಿದ್ದರು. ಕೊರೊನಾ ನಿಯಂತ್ರಣ ಮಾಡುವುದರಲ್ಲಿ ಯಾವ ಕೆಲಸ ನಡೆಯುತ್ತಿದೆ. ಏನು ಮಾಡಬೇಕು ಎಂಬ ಮಾಹಿತಿ ನಮಗೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಇದೆ ವೇಳೆ ಶಾಸಕ ಸುರೇಶ್ ಗೌಡ , ಸಚಿವ ನಾರಾಯಣ ಗೌಡ ಮಧ್ಯ ಏಕ ವಚನದಲ್ಲಿ ವಾಗ್ವಾದ ನೆಡೆಯಿತು.