ಆತ್ಮ ನಿರ್ಭರವೇ ನಾವು ಸೈನಿಕರಿಗೆ ಕೊಡುವ ಗೌರವ – ಮನ್ ಕಿ ಬಾತ್ ನಲ್ಲಿ ಮೋದಿ ಕರೆ
ಹೊಸದಿಲ್ಲಿ, ಜೂನ್ 28: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಮನುಕುಲ ಸಂಕಷ್ಟದಲ್ಲಿದೆ. ಈ ವೈರಾಣುವಿನ ನಿರ್ಮೂಲನೆಗೆ ಸರ್ಕಾರ ಮತ್ತು ಸಮಾಜ ಒಂದಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ಪ್ರಧಾನಿ ಮೋದಿ ಇಂದಿನ ಮನ್ ಕಿ ಬಾತ್ ನಲ್ಲಿ ಹೇಳಿದ್ದಾರೆ.
ಇಂದು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಹಲವಾರು ಜನ ಈ ವರ್ಷ ಶುಭವಲ್ಲ, ಯಾವಾಗ ಮುಗಿಯುತ್ತದೆ ಎನ್ನುತ್ತಿದ್ದಾರೆ. ಆದರೆ ಕಳೆದ ಆರು ತಿಂಗಳು ನಾವು ಯಾವುದೇ ಕಷ್ಟವಿಲ್ಲದೇ ಕಳೆದಿದ್ದೇವೆ. ಹೀಗಾಗಿ ಈ ವರ್ಷವನ್ನು ಕಷ್ಟದ ವರ್ಷ ಎಂದು ಪರಿಗಣಿಸದೇ ಅನ್ ಲಾಕ್ ಸಮಯದಲ್ಲಿ ಕೊರೊನಾವನ್ನು ಸೋಲಿಸಬೇಕಿದೆ ಎಂದು ಪ್ರಧಾನಿ ಮೋದಿ ಕರೆನೀಡಿದ್ದಾರೆ.
ಕೊರೊನಾ ಹಾವಳಿಯ ಜೊತೆಗೆ ದೇಶ ಭೂಕಂಪ, ಚಂಡಮಾರುತ ಮತ್ತು ಗಡಿ ಪ್ರದೇಶದಲ್ಲಿ ನೆರೆ ದೇಶಗಳ ದಾಳಿಯನ್ನು ಎದುರಿಸಬೇಕಾಗಿದೆ. ಆದರೆ ನಾವು ಹಲವಾರು ಸವಾಲುಗಳನ್ನು ಎದುರಿಸಿ ಗೆದ್ದು ಬಂದವರು ಎಂದು ನಮ್ಮ ಇತಿಹಾಸ ಹೇಳುತ್ತದೆ. ಹಾಗಾಗಿ ಈ ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಭಾರತ ಜಯಭೇರಿ ಗಳಿಸುವುದು ಖಂಡಿತ ಎಂದು ಪ್ರಧಾನಿ ಹೇಳಿದರು.
ಗಡಿಯಲ್ಲಿ ಸೈನಿಕರು ನಮ್ಮ ರಕ್ಷಣೆ ಮಾಡುತ್ತಿದ್ದಾರೆ. ಲಡಾಖ್ನಲ್ಲಿ ಭಾರತದ ಭೂಮಿ ಅತಿಕ್ರಮಿಸಲು ನೋಡಿದವರಿಗೆ ತಕ್ಕ ಉತ್ತರ ನೀಡಲಾಗಿದೆ. ದೇಶ ರಕ್ಷಣೆಗಾಗಿ ತಮ್ಮ ಪ್ರಾಣ ಸಮರ್ಪಿಸಿದ ವೀರ ಸೈನಿಕರ ಮೇಲೆ ಭಾರತಕ್ಕೆ ಅಪಾರ ಗೌರವವಿದೆ.
ಭಾರತಕ್ಕೆ ಸ್ನೇಹವನ್ನು ಕಾಪಾಡಿಕೊಳ್ಳುವುದು ಗೊತ್ತು ಹಾಗೇ ವಿನಾಕಾರಣ ಮೇಲೆರಗಿ ಬಂದವರಿಗೆ ತಕ್ಕ ಪ್ರತ್ಯುತ್ತರ ನೀಡುವುದೂ ಗೊತ್ತು.
ಆತ್ಮ ನಿರ್ಭರ ಭಾರತಕ್ಕಾಗಿ ಎಲ್ಲರೂ ಒಂದಾಗಿರುವುದು ನಿಜಕ್ಕೂ ಸಂತಸದ ಸಂಗತಿ. ಆತ್ಮ ನಿರ್ಭರವೇ ನಾವು ಸೈನಿಕರಿಗೆ ಕೊಡುವ ಗೌರವ. ಸ್ವದೇಶಿ ಉತ್ಪನ್ನಗಳನ್ನೇ ಖರೀದಿಸಿ, ಅದನ್ನೇ ಉಪಯೋಗಿಸೋಣ. ಜನರ ಸಹಕಾರವಿಲ್ಲದೇ ಯಾವುದು ಸಾಧ್ಯವಿಲ್ಲ. ದೇಶದ 130 ಕೋಟಿ ಜನರ ಮೇಲೆ ನನಗೆ ಅಚಲ ನಂಬಿಕೆಯಿದೆ ಎಂದರು.
ದೇಶ ಈಗ ಲಾಕ್ಡೌನ್ನಿಂದ ಅನ್ಲಾಕ್ ಸ್ಥಿತಿಯತ್ತ ಸಾಗುತ್ತಿದ್ದು, ನಾವು ಕೊರೊನಾ ಜೊತೆಗೆ ದೇಶದ ಅರ್ಥಿಕತೆಯ ಕಡೆಯೂ ಗಮನ ಹರಿಸಬೇಕಾಗಿದೆ.
ಅನ್ಲಾಕ್ ಸಮಯದಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಕೊರೊನಾದ ಬಗ್ಗೆ ನಿರ್ಲಕ್ಷ್ಯ ಮಾಡದೇ ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವುದು ಅವಶ್ಯ ಎಂದು ಪ್ರಧಾನಿ ಮೋದಿ ಹೇಳಿದರು.
ನನ್ನ ಪ್ರೀತಿಯ ಯುವಕರೇ, ಮಕ್ಕಳೆ, ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ ಎಂದು ಹೇಳಿದ ಪ್ರಧಾನಿ ನಿಮ್ಮ ಮನೆಯಲ್ಲಿರುವ ಹಿರಿಯರ ಸಂದರ್ಶನ ಮಾಡಿ. ಅವರ ಬಾಲ್ಯದ ನೆನಪನ್ನು ಮೆಲುಕು ಹಾಕಿಸಿ ಯಾವ ಆಟ ಆಡುತ್ತಿದ್ದರು, ಹೇಗೆ ಇದ್ದರು ಎಂಬ ಮಾಹಿತಿ ಪಡೆಯಿರಿ. ಪ್ರಧಾನಿ ಹೇಳಿದರು.
ದೇಶಕ್ಕೆ ಮಾನ್ಸೂನ್ ಆಗಮನವಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಮತ್ತು ಅವರು ತಮ್ಮ ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಮಳೆ ನೀರನ್ನು ಸಂಗ್ರಹಿಸಿ. ಕರ್ನಾಟಕದ ಸುಮಾರು 80 ವರ್ಷದ ವೃದ್ಧ ಕಾಳೆ ಗೌಡ ಎಂಬ ರೈತ 17 ಸಣ್ಣ ಸಣ್ಣ ಕೆರೆಗಳನ್ನು ನಿರ್ಮಾಣ ಮಾಡಿ ತಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆ ಇಲ್ಲವಾಗಿಸಿದ್ದಾರೆ. ಅವರ ಶ್ರಮ ಶ್ಲಾಘನೀಯ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.