ಭಜರಂಗದಳ ಕಾರ್ಯಕರ್ತನ ಕೊಲೆ | ಜಿಲ್ಲೆಯಲ್ಲಿ ಹೆಚ್ಚಿದ ಉದ್ವಿಗ್ನತೆ Saaksha Tv
ಶಿವಮೊಗ್ಗ: ನಿನ್ನೆ ರಾತ್ರಿ ಭಜರಂಗದಳ ಕಾರ್ಯಕರ್ತನ ಕೊಲೆ ಯಾಗಿದ್ದು, ಇಂದು ಮೆರವಣಿಗೆ ವೇಳೆ ಕೆಲ ಯುವಕರು ಕಲ್ಲು ತೂರಾಟ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಗಿದ್ದ. ಈತನ ಮೃತ ದೇಹವನ್ನು ಮೆಗ್ಗಾನ್ ಆಸ್ಪತ್ರೆಯಿಂದ ಮೃತನ ನಿವಾಸದವರೆಗೆ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಭಾಗವಹಿಸಿದ್ದರು. ಆದರೆ ಕೆಲ ಕಿಡಿಗೇಡಿಗಳು KSRTC ಬಸ್, ಮನೆ, ಕಟ್ಟಡ, ಹಾಗೂ ಸಿಕ್ಕ-ಸಿಕ್ಕವರ ಮೇಲೆ ಕಲ್ಲು ತೂರಾಟ ನಡೆಸಿದರು. ಜೊತೆಗೆ 2 ಬೈಕ್ಗಳಿಗೆ ಹಾಗೂ ಕಾರುಗಳಿಗೆ ಬೆಂಕಿಯನ್ನು ಹಚ್ಚಿದ್ದಾರೆ.
ಅಂಬುಲೆನ್ಸ್ ಮೂಲಕ ಮೃತದೇಹ ರವಾನೆ ಮಾಡುವಾಗಲೇ ಕಾರ್ಯಕರ್ತರು ಅಮರ್ ರಹೇ ಅಮರ್ ರಹೇ ಹರ್ಷ ಅಮರ್ ರಹೇ ಎಂಬ ಉದ್ಘಾರದೊಂದಿಗೆ ಅಂಬುಲೆನ್ಸ್ ಮುಂದೆ ಕೇಸರಿ ಧ್ವಜಗಳನ್ನು ಹಾರಾಟ ನಡೆಸಿದ್ದರು.
ನಿಷೇಧಾಜ್ಞೆ ನಡುವೆಯೂ ಪೊಲೀಸರು ಮೆರವಣಿಗೆಗೆ ಅವಕಾಶ ನೀಡಿದ್ದರು. ಆದರೆ ಪೊಲೀಸರನ್ನೇ ತಳ್ಳಿ ಅಂಗಡಿಗಳಿಗೆ ನುಗ್ಗಿ ಕೆಲ ಯುವಕರು ದಾಂಧಲೆ ನಡೆಸಿದರು. ಮನೆ, ಬ್ಯಾಂಕ್ ಅಂಗಡಿಗಳ ಮೇಲೆ ಕಲ್ಲುತೂರಾಟ ನಡೆದಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.