ಸಿಡಿ ನಕಲಿಯದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಬಾಲಚಂದ್ರ
1 min read
ಸಿಡಿ ನಕಲಿಯದ್ದು, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ : ಬಾಲಚಂದ್ರ
ಬೆಂಗಳೂರು : ರಮೇಶ ಜಾರಕಿಹೊಳಿ ವಿರುದ್ಧದ ಸಿಡಿ ನಕಲಿಯಾಗಿದ್ದು, ಹನಿಟ್ರ್ಯಾಪ್ ನಡೆಸುವ ಯತ್ನ ನಡೆದಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಆರೋಪಿಸಿದ್ದಾರೆ.
ದಿನೇಶ್ ಕಲ್ಲಹಳ್ಳಿ ಅವರು ದೂರು ವಾಪಸ್ ಪಡೆದ ಹಿನ್ನೆಲೆ ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಸಿಡಿ ನಕಲಿಯಾದದ್ದು, ಯುವತಿಯನ್ನು ಮುಂದೆ ಬಿಟ್ಟು ಹನಿಟ್ರ್ಯಾಪ್ ಮಾಡಲಾಗಿದೆ. ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿವೆ, ಬಿಜೆಪಿಗೆ ಮತ್ತು ಜಾರಕಿಹೊಳಿಗೆ ಕೆಟ್ಟ ಹೆಸರು ಬರಬೇಕು ಎಂದು ಇದನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಯುವತಿಯ ಹಿಂದೆ ಇಬ್ಬರು ಇದ್ದಾರೆ, ಅವರ ಹಿಂದೆ ನಾಲ್ಕು ಪುರುಷರಿದ್ದಾರೆ ಎಂದು ಆರೋಪಿಸಿದ ಬಾಲಚಂದ್ರ, ಆ ನಾಲ್ಕು ಜನರು ಸಿಗಬೇಕು, ಆಮೇಲೆ ಪ್ರಕರಣ ಸಂಪೂರ್ಣವಾಗಿ ಹೊರಗೆ ಬರಲಿದೆ. ಈಗಲೂ ನಾನು ಮಾತನಾಡುತ್ತಿರುವುದನ್ನು ಷಡ್ಯಂತ್ರ ಮಾಡಿದವರು ನೋಡುತ್ತಿದ್ದಾರೆ. ದಿನೇಶ್ ಕಲ್ಲಹಳ್ಳಿ ಅವರನ್ನು ಈ ಪ್ರಕರಣದಲ್ಲಿ ದಾರಿ ತಪ್ಪಿಸಲಾಗಿದೆ. ಅವರಿಗೆ ಮಾಹಿತಿ ಕೊಟ್ಟಿರುವವರು ಅವರನ್ನು ದಾರಿ ತಪ್ಪಿಸಿರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು ವಿಡಿಯೋ ಬಿಡುಗಡೆ ಹಿಂದೆ ರಾಜಕೀಯವಾಗಿ ರಮೇಶ ಜಾರಕಿಹೊಳಿ ಮುಗಿಸಲು ಷಡ್ಯಂತ್ರ ನಡೆದಿದೆ. ನಾವು ಕೇಸ್ ನಿಂದ ಹಿಂದೆ ಸರಿಯುವ ಪ್ರಶ್ನಯೇ ಇಲ್ಲ ಎಂದು ತಿಳಿಸಿದ ಬಾಲಚಂದ್ರ, ರಾಜಕಾರಣಿಗಳ ಸಿಡಿ ವಿಡಿಯೋ ಬಹಿರಂಗ ಹಿನ್ನೆಲೆ ಇಂತಹ ವಿಡಿಯೋಗೆ ಕಡಿವಾಣಕ್ಕೆ ಸೂಕ್ತ ಕಾನೂನು ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
