Bangalore | 300 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪರಿಶೀಲಿಸಿದ ಸಚಿವರು
ಬೆಂಗಳೂರು : ಬಿಬಿಎಂಪಿ ಇದೇ ಮೊದಲನೇ ಬಾರಿಗೆ 300 ಹಾಸಿಗೆ ಸಾಮರ್ಥ್ಯದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡುತ್ತಿದ್ದು, ಶೀಘ್ರವೇ ಉದ್ಘಾಟನೆಗೊಳಿಸಲಾಗುವುದು ಎಂದು ವಸತಿ ಸಚಿವರಾದ ಶ್ರೀ ವಿ.ಸೋಮಣ್ಣ ರವರು ತಿಳಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಅಗ್ರಹಾರ ದಾಸರಹಳ್ಳಿ ವಾರ್ಡ್ ಎಂ.ಸಿ ಲೇಔಟ್ ನಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಯ ಪರಿಶೀಲನೆಯ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಮೊದಲು ಹೆರಿಗೆ ಆಸ್ಪತ್ರೆಯಿದ್ದ ಸ್ಥಳದಲ್ಲಿ ಇಂದು ಎಲ್ಲಾ ರೀತಿಯ ಸೌಲಭ್ಯಗಳುಳ್ಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ನಿರ್ಮಾಣ ಮಾಡಲಾಗಿದೆ ಎಂದರು.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 300 ಹಾಸಿಗೆಗಳು, 7 ಆಪರೇಷನ್ ಥಿಯೇಟರ್ಗಳಿವೆ. ಕಿದ್ವಾಯಿ ಆಸ್ಪತ್ರೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಜೊತೆಗೆ ನಿಮ್ಹಾನ್ಸ್, ಜಯದೇವ ಹೃದ್ರೋಗ ಆಸ್ಪತ್ರೆಯೊಂದಿಗೂ ಮಾತುಕತೆ ನಡೆಯುತ್ತಿದೆ. ಇದು ಜನರಲ್ ಆಸ್ಪತ್ರೆಯಾಗಿದ್ದು, ಎಲ್ಲಾ ರೀತಿಯ ಚಿಕಿತ್ಸೆ ಲಭ್ಯವಿದೆ. ಎಲ್ಲಾ ವೈದ್ಯಕೀಯ ಸಲಕರಣೆಗಳ ಜೊತೆ ಎಮ್.ಆರ್.ಐ ನಿಂದ ಹಿಡಿದು ಎಲ್ಲಾ ರೀತಿಯ ಚಿಕಿತ್ಸೆಯನ್ನು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ಸರ್ಕಾರದ ಅಮೃತ ನಗರೋತ್ಥಾನದ ಅನುದಾನದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿದ್ದು, ಬಿಬಿಎಂಪಿಯು ಆಸ್ಪತ್ರೆಯನ್ನು ನಡೆಸಿಕೊಂಡು ಹೋಗಲಿದೆ. ಆಸ್ಪತ್ರೆ ಕಟ್ಟಡ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ವಿದ್ಯುತ್, ವೈದ್ಯಕೀಯ ಉಪಕರಣಗಳ ಅಳವಡಿಕೆ ಹಾಗೂ ಸ್ವಚ್ಛತೆ ಬಾಕಿಯಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
![Bangalore](http://saakshatv.com/wp-content/uploads/2022/11/somanna-bng.jpg)
ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ವಿವರ:
ನಗರದ ಅಗ್ರಹಾರ ದಾಸರಹಳ್ಳಿ ವಾರ್ಡ್ ಎಂ.ಸಿ.ಲೇಔಟ್ನಲ್ಲಿ ಮಾನ್ಯ ಮುಖ್ಯಮಂತ್ರಿಗಳ ನವನಗರೋತ್ಥಾನ ಯೋಜನೆ ಅಡಿಯಲ್ಲಿ ತಳ ಮಹಡಿ, ನೆಲಮಹಡಿ ಸೇರಿದಂತೆ ನಾಲ್ಕು ಅಂತಸ್ತಿನ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ.
ಆಸ್ಪತ್ರೆಯ ಸ್ವತ್ತಿನ ವಿಸ್ತೀರ್ಣ ಸುಮಾರು 4872.15 ಚ.ಮೀ ಇದ್ದು, ತಳಮಹಡಿಯಲ್ಲಿ ಪ್ರಯೋಗಾಲಯ, ವಿಕಿರಣಶಾಸ್ತ್ರ, ವಿಭಾಗ, ವಿದ್ಯುತ್, ಅಗ್ನಿಶಾಮಕ, ಎಸ್.ಟಿ.ಪಿ, ಪಾರ್ಕಿಂಗ್, ಮೂರು ಲಿಫ್ಟ್, 2 ಮೆಟ್ಟಿಲುಗಳಿವೆ. ನೆಲಮಹಡಿಯಲ್ಲಿ ಓಪಿಡಿ ಬ್ಲಾಕ್, ತುರ್ತು ಪ್ರವೇಶ ಹಾಗೂ ಉಳಿದ ಮಹಡಿಗಳಲ್ಲಿ ಲ್ಯಾಬ್, ಫಾರ್ಮಸಿ, ತುರ್ತು ಚಿಕಿತ್ಸೆ, ಒಳರೋಗಿ ವಿಭಾಗ, ಐ.ಸಿ.ಯು, ಓ.ಟಿ, ಡಯಾಲಿಸಿಸ್ ಸೆಂಟರ್, ಎಕ್ಸ್ರೇ ವಿಭಾಗ, ಜನರಲ್/ಸ್ಪೆಷಲ್ ವಾರ್ಡ್ಗಳು ಸೇರಿದಂತೆ ಇನ್ನಿತರೆ ಹಲವಾರು ಸೌಲಭ್ಯಗಳನ್ನು ಒಳಗೊಂಡಿರುತ್ತದೆ.
ಈ ವೇಳೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ವಲಯ ಜಂಟಿ ಆಯುಕ್ತರಾದ ಯೋಗೇಶ್, ವಲಯ ಮುಖ್ಯ ಅಭಿಯಂತರರಾದ ದೊಡ್ಡಯ್ಯ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.