ಹೈದರಾಬಾದ್: ಆರ್ ಸಿಬಿ ತಂಡ ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಂಡಿದೆ. ಇಂದು ನಡೆದ ಪಂದ್ಯದಲ್ಲಿ ಆರ್ ಸಿಬಿ ಭರ್ಜರಿ ಜಯ ಸಾಧಿಸಿದೆ.
ತವರಿನಲ್ಲಿ ಅನುಭವಿಸಿದ ವಿರೋಚಿತ ಸೋಲಿಗೆ ಈ ಮೂಲಕ ಬೆಂಗಳೂರು ತಂಡ ತಕ್ಕ ಉತ್ತರ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು ಬರೋಬ್ಬರಿ 206 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಹೈದರಾಬಾದ್ ತಂಡ 8 ವಿಕೆಟ್ ಕಳೆದುಕೊಂಡು ಕೇವಲ 171 ರನ್ ಗಳಿಸಿತು. ಈ ಮೂಲಕ ಬರೋಬ್ಬರಿ 35 ರನ್ ಗಳಿಂದ ಬೆಂಗಳೂರು ತಂಡ ಗೆಲುವು ಸಾಧಿಸುವ ಮೂಲಕ ತವರಿನಲ್ಲಿ ಅನುಭವಿಸಿದ್ದ ವಿರೋಚಿತ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಹೈದರಾಬಾದ್ ಯಾವುದೇ ರೀತಿಯಲ್ಲಿ ಇಂದು ಬೆಂಗಳೂರಿಗೆ ಸವಾಲು ಒಡ್ಡಲಿಲ್ಲ. ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗಗಳೆರಡರಲ್ಲಿಯೂ ಇಂದು ವಿಫಲವಾಯಿತು. 5 ಓವರ್ಗಳಲ್ಲಿ 56 ರನ್ ಗಳಿಸಿದ್ದ ಹೈದರಾಬಾದ್ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಯಾವೊಬ್ಬ ಆಟಗಾರ ಕೂಡ ಆರ್ ಸಿಬಿ ಎದುರು ಮಿಂಚಲು ಆಗಲಿಲ್ಲ. ಪರಿಣಾಮ ಹೈದರಾಬಾದ್ ಸೋಲು ಕಾಣುವಂತಾಯಿತು.
ಹೈದರಾಬಾದ್ ಪರ ಅಭಿಷೇಕ್ ಶರ್ಮಾ 31, ನಾಯಕ ಪ್ಯಾಟ್ ಕಮ್ಮಿನ್ಸ್ 31, ನಿತೀಶ್ ಕುಮಾರ್ ರೆಡ್ಡಿ 13, ಟ್ರಾವಿಸ್ ಹೆಡ್ 1, ಹೆನ್ರಿಕ್ ಕ್ಲಾಸೆನ್, ಏಡನ್ ಮಾರ್ಕ್ರಮ್ ತಲಾ 7, ಅಬ್ದುಲ್ ಸಮದ್ 10, ಭುವನೇಶ್ವರ್ ಕುಮಾರ್ 13, ಶಹಬಾಜ್ ಅಹ್ಮದ್ 40, ಜಯದೇವ್ ಉನಡ್ಕಟ್ 8 ರನ್ ಗಳಿಸಿ ಔಟ್ ಆದರು.
ಆರ್ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಸ್ಪೋಟಕ ಆರಂಭ ನೀಡಿದರೂ. ಆದರೆ, ಕೊಹ್ಲಿ ನನಂತರ ನಿಧಾನಗತಿ ಆಟವಾಡಿದರು. ಡುಪ್ಲೆಸಿಸ್ 12 ಎಸೆತಗಳಲ್ಲಿ 25 ರನ್ ಗಳಿಸಿದರು. ರಜತ್ ಪಾಟೀದಾರ್ ಕೇವಲ 20 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಕೊನೆಯಲ್ಲಿ ಗ್ರೀನ್ ಮತ್ತಿತರ ಬ್ಯಾಟರ್ಗಳ ಸಂಘಟಿತ ಪ್ರದರ್ಶನದಿಂದ ಆರ್ಸಿಬಿ 200 ರನ್ಗಳ ಗಡಿ ದಾಟುವಲ್ಲಿ ಬೆಂಗಳೂರು ತಂಡ ಯಶಸ್ವಿಯಾಯಿತು.
ಆರ್ಸಿಬಿ ಪರ ರಜತ್ ಪಾಟೀದಾರ್ 20 ಎಸೆತಗಳಲ್ಲಿ 50 ರನ್ (5 ಸಿಕ್ಸರ್, 2 ಬೌಂಡರಿ), ವಿರಾಟ್ ಕೊಹ್ಲಿ 51 ರನ್ (43 ಎಸೆತ, 4 ಬೌಂಡರಿ, 1 ಸಿಕ್ಸರ್), ಡುಪ್ಲೆಸಿಸ್ 25 ರನ್, ಕ್ಯಾಮರೂನ್ ಗ್ರೀನ್ 37 ರನ್, ಮಹಿಪಾಲ್ ಲೋಮ್ರೋರ್ 7ರನ್, ದಿನೇಶ್ ಕಾರ್ತಿಕ್ 11 ರನ್, ಸ್ವಪ್ನಿಲ್ ಸಿಂಗ್ 12 ರನ್ ಗಳಿಸಿ ಮಿಂಚಿದರು. ಈ ಮೂಲಕ ಟೂರ್ನಿಯಲ್ಲಿ 2 ನೇ ಗೆಲುವನ್ನು ಬೆಂಗಳೂರು ತಂಡ ಗಳಿಸಿತು. ಕೊನೆಯ ಎಲ್ಲ ಪಂದ್ಯಗಳನ್ನು ಗೆದ್ದು ಏನಾದರೂ ಪವಾಡ ನಡೆದರೆ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೆ ಏರಬಹುದು.