ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ನಡುವೆ ಎಲ್ಲವೂ ಸರಿ ಇಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ. ಬಿಡದಿ ಟೌನ್ ಶಿಪ್ ಯೋಜನೆಯ ವಿರುದ್ಧದ ಹೋರಾಟದಲ್ಲಿ ಮಿತ್ರ ಪಕ್ಷಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ಬಿಜೆಪಿ ನಾಯಕರೊಂದಿಗೆ ಚರ್ಚಿಸುವ ಮೊದಲೇ ಜೆಡಿಎಸ್ ಏಕಾಂಗಿಯಾಗಿ ಪಾದಯಾತ್ರೆಯ ದಿನಾಂಕವನ್ನು ಘೋಷಿಸುವ ಮೂಲಕ ಬಿಜೆಪಿಗೆ ಶಾಕ್ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಜೆಡಿಎಸ್ ನಾಯಕರೊಂದಿಗೆ ಚರ್ಚಿಸಿ ಜಂಟಿ ಹೋರಾಟದ ದಿನಾಂಕ ನಿಗದಿ ಮಾಡುವುದಾಗಿ ಹೇಳಿದ್ದರು. ಆದರೆ ಇದ್ಯಾವುದಕ್ಕೂ ಕಾಯದ ಜೆಡಿಎಸ್ ನಾಯಕರು ಈಗಲೇ ತಮ್ಮ ಹೋರಾಟದ ನಕ್ಷೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಬೆಳವಣಿಗೆಯು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಮೈತ್ರಿಯಲ್ಲಿ ದಳಪತಿಗಳೇ ಮೇಲುಗೈ ಸಾಧಿಸಲು ಮುಂದಾಗಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಜೆಡಿಎಸ್ ಪಾದಯಾತ್ರೆಯ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಜುಲೈ 30 ರಂದು ಮೊದಲ ದಿನದ ಪಾದಯಾತ್ರೆ ಆರಂಭವಾಗಲಿದ್ದು, ಬೆಳಗ್ಗೆ ಬೈರಮಂಗಲ ವೃತ್ತದಿಂದ ಬಿಡದಿ ವೃತ್ತದವರೆಗೆ 8 ಕಿಲೋಮೀಟರ್ ಮತ್ತು ಮಧ್ಯಾಹ್ನ ಬಿಡದಿ ವೃತ್ತದಿಂದ ಕ್ರೈಸ್ಟ್ ವಿಶ್ವವಿದ್ಯಾಲಯದವರೆಗೆ 7 ಕಿಲೋಮೀಟರ್ ಸೇರಿ ಒಟ್ಟು 15 ಕಿಲೋಮೀಟರ್ ಸಂಚರಿಸಲಿದೆ.
ಜುಲೈ 31 ರಂದು ಎರಡನೇ ದಿನದ ಪಾದಯಾತ್ರೆಯಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ನೈಸ್ ಜಂಕ್ಷನ್ ವರೆಗೆ 6 ಕಿಲೋಮೀಟರ್ ಮತ್ತು ಮಧ್ಯಾಹ್ನ ಅಲ್ಲಿಂದ ಆರ್ ಆರ್ ನಗರ ಕಮಾನು ವರೆಗೆ 10 ಕಿಲೋಮೀಟರ್ ಸೇರಿ ಒಟ್ಟು 16 ಕಿಲೋಮೀಟರ್ ಸಾಗಲಿದೆ.
ಆಗಸ್ಟ್ 1 ರಂದು ಕೊನೆಯ ದಿನದಂದು ಆರ್ ಆರ್ ನಗರದಿಂದ ಫ್ರೀಡಂ ಪಾರ್ಕ್ ವರೆಗೆ 7 ಕಿಲೋಮೀಟರ್ ಪಾದಯಾತ್ರೆ ನಡೆಸಿ, ನಂತರ ಅಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ನಡೆಸಲು ಜೆಡಿಎಸ್ ಯೋಜನೆ ರೂಪಿಸಿದೆ.
ಸಮನ್ವಯದ ಕೊರತೆನಾ..
ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಮತ್ತು ಎರಡೂ ಪಕ್ಷಗಳು ಒಟ್ಟಾಗಿ ಹೋರಾಟ ಮಾಡುತ್ತವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಜೆಡಿಎಸ್ ನಾಯಕರನ್ನು ಸಂಪರ್ಕಿಸಲು ಬಿಜೆಪಿ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯ ಮತ್ತು ಬಣ ರಾಜಕೀಯದ ನಡುವೆ ಎಚ್ ಡಿ ಕುಮಾರಸ್ವಾಮಿ ಅವರನ್ನು ಮೈತ್ರಿಕೂಟದ ಪ್ರಮುಖ ನಾಯಕನನ್ನಾಗಿ ಬಿಂಬಿಸಲು ಜೆಡಿಎಸ್ ಈ ತಂತ್ರ ಹೂಡಿದೆ ಎನ್ನಲಾಗುತ್ತಿದೆ. ಮಿತ್ರ ಪಕ್ಷದ ಅಭಿಪ್ರಾಯ ಪಡೆಯದೆ ಪಾದಯಾತ್ರೆ ಘೋಷಿಸಿರುವುದು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಈ ದೋಸ್ತಿಯ ಕುಸ್ತಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.








