ದೋಹಾ: ಕತಾರ್ನಲ್ಲಿ (Qatar) ವರ್ಷಕ್ಕೂ ಅಧಿಕ ಕಾಲ ಬಂಧಿತರಾಗಿರುವ 8 ಜನ ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗೆ (Former Navy Personnel) ಕತಾರ್ನ ನ್ಯಾಯಾಲಯ ಮರಣದಂಡನೆ (Death Penalty) ವಿಧಿಸಿದ್ದು, ಭಾರತವು ಕೆಂಡಾಮಂಡಲವಾಗಿದೆ.
ಈ ತೀರ್ಪಿಗೆ ಭಾರತ (India) ತೀವ್ರ ಆಘಾತ ವ್ಯಕ್ತಪಡಿಸಿದೆ ಹಾಗೂ ಸಾಧ್ಯವಿರುವ ಕಾನೂನು ಕ್ರಮಗಳನ್ನು ಅನ್ವೇಷಿಸುತ್ತಿರುವುದಾಗಿ ತಿಳಿಸಿದೆ. ಮರಣದಂಡನೆಯ ತೀರ್ಪಿನಿಂದ ತೀವ್ರ ಆಘಾತಕ್ಕೊಳಗಾಗಿದ್ದೇವೆ ಮತ್ತು ವಿವರವಾದ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದೆ.
ಈ ಪ್ರಕರಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದೇವೆ ಮತ್ತು ಅದನ್ನು ನಿಕಟವಾಗಿ ಅನುಸರಿಸುತ್ತಿದ್ದೇವೆ. ಎಲ್ಲಾ ಕಾನೂನು ಸಹಾಯವನ್ನು ವಿಸ್ತರಿಸುವುದನ್ನು ಮುಂದುವರಿಸುತ್ತೇವೆ ಎಂದು ಭಾರತ ಹೇಳಿದೆ.
ಆಗಸ್ಟ್ನಲ್ಲಿ ಕತಾರ್ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ 8 ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಯನ್ನು ಇಸ್ರೇಲ್ಗೆ ಗೂಢಾಚಾರ ಕೆಲಸ ಮಾಡುತ್ತಿದ್ದ ಶಂಕೆಯ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಭಾರತೀಯ ಮಾಜಿ ಅಧಿಕಾರಿಗಳಾದ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಅವರನ್ನು 2022ರ ಆಗಸ್ಟ್ 30 ರಂದು ಕತಾರ್ನ ಗುಪ್ತಚರ ಸಂಸ್ಥೆಯಿಂದ ಬಂಧಿಸಲಾಗಿತ್ತು.