ನವದೆಹಲಿ: ಸಂಸದ ರಾಹುಲ್ ಗಾಂಧಿಗೆ ವಯನಾಡಿನಲ್ಲಿ ಬಿಗ್ ಶಾಕ್ ಎದುರಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಗೆ ಸಿಪಿಐ ಪಕ್ಷ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ.
ಕೇರಳದಲ್ಲಿ ಲೋಕಸಭೆ ಚುನಾವಣೆಗೆ ನಾಲ್ಕು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಸಿಪಿಐ ವಯನಾಡಿನಲ್ಲಿ ಅಭ್ಯರ್ಥಿ ಘೋಷಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ INDIA ಮೈತ್ರಿಕೂಟದ ಭಾಗವಾಗಿರುವ ಸಿಪಿಐ ತಿರುವನಂತಪುರಂನಿಂದ ಪನ್ನಿಯನ್ ರವೀಂದ್ರನ್, ವಯನಾಡಿನಿಂದ ಅನ್ನಿ ರಾಜಾ ಅವರನ್ನು ಕಣಕ್ಕಿಳಿಸಿದೆ. ವಿಎಸ್ ಸುನೀಲ್ ಕುಮಾರ್ ತ್ರಿಶೂರ್ ಮತ್ತು ಅರುಣ್ ಕುಮಾರ್ ಮಾವೇಲಿಕರ ಸ್ಪರ್ಧಿಸಲಿದ್ದಾರೆ.
ಕಾಂಗ್ರೆಸ್ ನ ಶಶಿ ತರೂರ್ ಅವರು ತಿರುವನಂತಪುರಂನ ಹಾಲಿ ಸಂಸದರಾಗಿದ್ದು, ರಾಹುಲ್ ಗಾಂಧಿ ವಯನಾಡ್ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಿದರೆ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಅವರ ಪತ್ನಿ ಅನ್ನಿ ರಾಜಾ ಅವರ ವಿರುದ್ಧ ಸೆಣಸಾಟ ನಡೆಸಬೇಕಾಗುತ್ತದೆ. ಕೇರಳದಲ್ಲಿನ ಒಟ್ಟು 20 ಲೋಕಸಭಾ ಕ್ಷೇತ್ರಗಳ ಪೈಕಿ 2019 ರ ಚುನಾವಣೆಯಲ್ಲಿ ಸಿಪಿಐ 4 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಯಾವ ಕ್ಷೇತ್ರದಲ್ಲಿ ಕೂಡ ಗೆಲುವು ಸಾಧಿಸಿರಲಿಲ್ಲ.