ತಮ್ಮನ ಆತ್ಮಹತ್ಯೆ ಸುದ್ದಿ ಕೇಳ್ತಿದ್ದಂತೆ ತಾನೂ ನೇಣಿಗೆ ಶರಣಾದ ಅಣ್ಣ..!
ಮೈಸೂರು: ತಮ್ಮನ ಆತ್ಮಹತ್ಯೆ ಸುದ್ದಿ ಕೇಳಿ ಮಾನಸಿಕವಾಗಿ ಕುಸಿದುಹೋಗಿದ್ದ ಅಣ್ಣ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದೆ. 28 ವರ್ಷದ ಅಣ್ಣ ವೆಂಕಟೇಶ್ ಮತ್ತು 26 ವರ್ಷದ ಹರೀಶ್ ಮೃತ ಸೋಹದರರಾಗಿದ್ದಾರೆ. ರೈತನಾಗಿದ್ದ ಹರೀಶ್ ಟ್ರ್ಯಾಕ್ಟರ್ ಚಾಲಕ ಸಹ ಆಗಿದ್ದನು. ಹರೀಶ್ ಟ್ರ್ಯಾಕ್ಟರ್ ವೇಗವಾಗಿ ಚಲಾಯಿಸುತ್ತಿದ್ದರಿಂದ ತಂದೆ ಚಿನ್ಮಯಿಗೌಡ ಬೈದು ಬುದ್ದಿವಾದ ಹೇಳಿದ್ದಾರೆ. ಮತ್ತೊಂದೆಡೆ ಮೈಸೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಹರೀಶ್ ತಮ್ಮನಿಗೆ ಕರೆ ಮಾಡಿ ನಿಧಾನವಾಗಿ ಟ್ರ್ಯಾಕ್ಟರ್ ಚಲಾಯಿಸುವಂತೆ ತಿಳಿ ಹೇಳಿದ್ದ. ತನ್ನ ಪ್ರೀತಿಯ ಅಣ್ಣ ತನಗೆ ಬೈದನೆಂದು ಮನನೊಂದಿದ್ದ ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇತ್ತ ತಮ್ಮನ ಸಾವಿನ ಸುದ್ದಿ ತಿಳಿದ ವೆಂಕಟೇಶ್ ಮಾನಸಿಕವಾಗಿ ಕುಸಿದಿದ್ದ. ಇದೇ ವೇಳೆ ಆತನ ಮೊಬೈಲ್ ಗೆ ತಮ್ಮನ ಸಾವಿನ ಫೋಟೋಗಳು ಬಂದಿವೆ. ಇದನ್ನ ನೋಡಿ ಆಘತಕ್ಕೀಡಾದ ವೆಂಕಟೇಶ್, ನನ್ನಿಂದಲೇ ತಮ್ಮನ ಸಾವಾಯ್ತು ಎಂದು ನೊಂದು ಊರಿಗೆ ಬರುವ ಬದಲು ಸರಗೂರು ರಸ್ತೆ ಕಡೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.