ಹಾಸನ : ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರೇ ರಾಜ್ಯದ ಸಿಎಂ ಎಂದು ಶಾಸಕ ಪ್ರೀತಂ ಗೌಡ ಭವಿಷ್ಯ ನುಡಿದಿದ್ದಾರೆ.
ವಿಜಯೇಂದ್ರ ಅವರು ಸೂಪರ್ ಸಿಎಂ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಪ್ರೀತಂ ಗೌಡ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸೂಪರ್ ಸಿಎಂ ಎನ್ನುವ ಅವಶ್ಯಕತೆಯಿಲ್ಲ. ಮುಂದಿನ ದಿನಗಳಲ್ಲಿ ಅವರೇ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ, ಯೋಗ್ಯತೆ ವಿಜಯೇಂದ್ರ ಅವರಿಗಿದೆ. ಬಿಜೆಪಿ ಕಾರ್ಯಕರ್ತನಾಗಿ ವಿಜಯೇಂದ್ರ ಮಾಡುತ್ತಿರುವ ಕೆಲಸಗಳು ಪ್ರತಿಪಕ್ಷವನ್ನು ದಿಗಿಲುಗೊಳಿಸಿವೆ. ಹೀಗಾಗಿ ಸೂಪರ್ ಸಿಎಂ ಪಟ್ಟ ನೀಡಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡುತ್ತಿದೆ. ವ್ಯಕ್ತಿಯೊಬ್ಬ ಬೆಳೆಯುತ್ತಿದ್ದಾನೆ ಎಂದರೆ ಆತನತ್ತ ಎಲ್ಲರ ಗಮನ ಇರುತ್ತದೆ. ಇದಕ್ಕಾಗಿ ಪ್ರತಿಪಕ್ಷದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಪಕ್ಷಗಳನ್ನು ಟೀಕಿಸಿದರು.
ಇದೇ ವೇಳೆ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಅವರು, ಮುಂದಿನ 3 ವರ್ಷ ಯಡಿಯೂರಪ್ಪರೇ ಸಿಎಂ. ಅವರ ನೇತೃತ್ವದಲ್ಲೇ 2023ರ ಚುನಾವಣೆ ಎದುರಿಸುತ್ತೇವೆ. ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎನ್ನುವುದು ಅಷ್ಟೇ ಸತ್ಯ. ನಾನು ಹೇಳಿದ ಭವಿಷ್ಯ ಯಾವತ್ತೂ ಸುಳ್ಳಾಗುವುದಿಲ್ಲ. 120 ಶಾಸಕರು ಯಡಿಯೂರಪ್ಪರ ಜತೆಗಿದ್ದೇವೆ. ಸಿಎಂ ರಾಜ್ಯದ ಅಭಿವೃದ್ಧಿ ಕುರಿತು ಚರ್ಚಿಸಲು ದೆಹಲಿಗೆ ತೆರಳಿದ್ದಾರೆ. ಒಬ್ಬ ಶಾಸಕನಾಗಿ ನಾನು ಯಡಿಯೂರಪ್ಪರ ಅಣತಿಯಂತೆ ಕೆಲಸ ಮಾಡುತ್ತೇನೆ. ಯಾವುದೇ ಹುದ್ದೆಯ ಆಕಾಂಕ್ಷಿ ನಾನಲ್ಲ ಎಂದು ಪ್ರೀತಂ ಗೌಡ ತಿಳಿಸಿದ್ದಾರೆ.