ಲೋಕಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.
ದೆಹಲಿ ಅಂಗಳದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಕುರಿತು ಚರ್ಚೆ ನಡೆಯುತ್ತಿದೆ. ಸೋನಿಯಾ ಗಾಂಧಿ ಸ್ಪರ್ಧೆ ಮಾಡದ ಕಾರಣ ಹಿರಿಯರೊಬ್ಬರು ಸ್ಪರ್ಧಿಸಬೇಕೆಂದು ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಖರ್ಗೆ ಸ್ಪರ್ಧೆ ಮುನ್ನೆಲೆಗೆ ಬಂದಿದೆ.
ಮಲ್ಲಿಕಾರ್ಜುನ ಖರ್ಗೆ ಅನುಭವಸ್ಥ ಹಾಗೂ ಹಿರಿಯ ನಾಯಕರು. ಅಲ್ಲದೇ ಎಐಸಿಸಿ ಅಧ್ಯಕ್ಷ ಹಾಗೂ ದಲಿತ ನಾಯಕರಾಗಿದ್ದಾರೆ. ಈ ಕಾರಣಕ್ಕೆ ಖರ್ಗೆ ಸ್ಪರ್ಧೆ ಮಾಡಲಿ ಎಂದು ಕಾಂಗ್ರೆಸ್ ಅವರ ಮನವೊಲಿಸುವ ಕಾರ್ಯ ಮಾಡುತ್ತಿದೆ.
ಆದರೆ, ಖರ್ಗೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಶುಕ್ರವಾರ ಬಿಡುಗಡೆಯಾದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕಲಬರಗಿ ಕ್ಷೇತ್ರಕ್ಕೆ ಹೆಸರು ಸೂಚಿಸಿಲ್ಲ. ಹೀಗಾಗಿ ಅವರು ಸ್ಪರ್ಧಿಸಬಹುದು ಎಂಬ ಮಾತು ಕೇಳಿ ಬರುತ್ತಿದೆ.