ಕನ್ಹಯ್ಯ ಪೌರತ್ವ ರದ್ದು ಕೋರಿ ಸಲ್ಲಿಸಿದ ಅರ್ಜಿ ವಜಾ- ಸಮಯ ವ್ಯರ್ಥ ಮಾಡಿದಕ್ಕೆ ಅರ್ಜಿದಾರನಿಗೆ ದಂಡ
ಅಲಹಾಬಾದ್, ಸೆಪ್ಟೆಂಬರ್07: ಸಿಪಿಐ ನಾಯಕ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರ ಪೌರತ್ವವನ್ನು ರದ್ದುಗೊಳಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯ ಕುರಿತು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ಎಸ್.ಕೆ.ಗುಪ್ತಾ ಮತ್ತು ಅಲಹಾಬಾದ್ ಹೈಕೋರ್ಟ್ ನ ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರನ್ನೊಳಗೊಂಡ ನ್ಯಾಯಪೀಠ ವಾರಣಾಸಿಯ ನಾಗೇಶ್ವರ್ ಮಿಶ್ರಾ ಸಲ್ಲಿಸಿದ್ದ ಪಿಐಎಲ್ ಅನ್ನು ವಜಾಗೊಳಿಸಿದೆ. ಪಿಐಎಲ್ ಅನ್ನು ಅರ್ಹತೆಯಿಲ್ಲದ ಮತ್ತು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ ಎಂದು ಹೇಳುವ ಮೂಲಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.
ಕನ್ಹಯ್ಯ ಕುಮಾರ್ ಅವರು ಫೆಬ್ರವರಿ 9, 2016 ರಂದು ಜೆಎನ್ಯು ಕ್ಯಾಂಪಸ್ನಲ್ಲಿ ರಾಷ್ಟ್ರ ವಿರೋಧಿ ಘೋಷಣೆಗಳನ್ನು ಎತ್ತಿದ್ದಾರೆ ಎಂದು ಅರ್ಜಿದಾರರು ಹೇಳಿಕೊಂಡಿದ್ದರು ಆದರೆ ಕೇಂದ್ರವು ಈವರೆಗೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಭಾರತೀಯ ಪೌರತ್ವ ಕಾಯ್ದೆ-1955ರ ಸೆಕ್ಷನ್ 10ರ ಅನ್ವಯ ಪೌರತ್ವ ರದ್ದುಪಡಿಸುವ ಸೆಕ್ಷನ್ ಭಾರತೀಯರಲ್ಲದವರಿಗೆ ನೀಡಿದ ಪೌರತ್ವಕ್ಕೆ ಅನ್ವಯಿಸುತ್ತದೆಯೇ ವಿನಾ ಭಾರತದಲ್ಲೇ ಜನಿಸಿದವರಿಗೆ ಅನ್ವಯಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಕೋರ್ಟ್ ಸಮಯವನ್ನು ವ್ಯರ್ಥ ಮಾಡಿರುವುದಕ್ಕೆ ಅರ್ಜಿದಾರರಿಗೆ 25 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿದೆ