ದೇವೇಗೌಡರನ್ನು ನಾನು ತಂದೆಯ ಸ್ಥಾನದಲ್ಲಿರಿಸಿದ್ದೇನೆ : ಚಲುವರಾಯಸ್ವಾಮಿ
ಮಂಡ್ಯ : ಹೆಚ್ ಡಿ ಕುಮಾರಸ್ವಾಮಿ ಅವರಿಗಿಂತಲೂ ದೇವೇಗೌಡರಿಗೆ ನಾನು ಹೆಚ್ಚು ಗೌರವ ಕೊಟ್ಟಿದ್ದೇನೆ. ಅವರನ್ನು ತಂದೆಯ ಸ್ಥಾನದಲ್ಲಿರಿಸಿದ್ದೇನೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೆಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಟಾಂಗ್ ನೀಡಿದ ಚಲುವರಾಯಸ್ವಾಮಿ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ ಅಭಿವೃದ್ಧಿಗೆ ಪೂರಕವಾದ ರಾಜಕಾರಣ ಮಾಡಲಿ.
ತೇಜೋವಧೆ ರಾಜಕಾರಣ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಜಿಲ್ಲೆಯಲ್ಲಿ ನಾವು ರಾಜಕಾರಣ ಮಾಡುವುದರಿಂದ ನಿಮಗಾಗಿರುವ ತೊಂದರೆ ಏನು?.
ನಾವು ರಾಜಕೀಯವಾಗಿ ಬೆಳೆಯಲೇಬಾರದು ಎಂಬುದು ನಿಮ್ಮ ಉದ್ದೇಶವೇ? ನಮಗಿರುವುದು ಒಂದೇ ಕರ್ಮಭೂಮಿ. ಅದು ಮಂಡ್ಯ ಜಿಲ್ಲೆ.
ನಿಮಗಾದರೆ ಇಡೀ ದೇಶವೇ ಇದೆ. ಹೋದ ಕಡೆಯಲ್ಲೆಲ್ಲಾ ನನ್ನ ಕರ್ಮಭೂಮಿ ಅಂತೀರಾ, ನನ್ನ ಜಿಲ್ಲೆ ಅಂತೀರಾ. ನಮಗೆ ಅಂತಹ ಪರಿಸ್ಥಿತಿ ಇಲ್ಲ ಎಂದು ಟಾಂಗ್ ನೀಡಿದರು.
ಇನ್ನು ಹೆಚ್ ಡಿ ಕುಮಾರಸ್ವಾಮಿ ಅವರಿಗಿಂತಲೂ ದೇವೇಗೌಡರಿಗೆ ನಾನು ಹೆಚ್ಚು ಗೌರವ ಕೊಟ್ಟಿದ್ದೇನೆ. ಅವರನ್ನು ತಂದೆಯ ಸ್ಥಾನದಲ್ಲಿರಿಸಿದ್ದೇನೆ.
ನನ್ನ ಮನೆಯ ಗೃಹ ಪ್ರವೇಶಕ್ಕೆ ದೇವೇಗೌಡರು-ಚೆನ್ನಮ್ಮ ಅವರಿಂದಲೇ ಪೂಜೆ ಮಾಡಿಸಿದ್ದೆ. ಕುಮಾರಸ್ವಾಮಿ ಅವರ ಮನೆಯ ಗೃಹ ಪ್ರವೇಶಕ್ಕೆ ದೇವೇಗೌಡರನ್ನ ಕೂರಿಸಿ ಪೂಜೆ ಮಾಡಿಸಿದ್ದರೋ ಇಲ್ಲವೋ ಗೊತ್ತಿಲ್ಲ.
ನಾವಂತೂ ಗೌಡರ ಕುಟುಂಬದ ಬಗ್ಗೆ, ನನ್ನ ರಾಜಕೀಯ ಜೀವನದಲ್ಲೆಲ್ಲೂ ಹಗುರವಾಗಿ ಮಾತನಾಡಿಲ್ಲ ಎಂದು ಸ್ಪಷ್ಟಪಿಸಿದರು.
ಇದೇ ವೇಳೆ ಹಾಸನದ ಮೇಲಿರುವ ಪ್ರೀತಿ ಮಂಡ್ಯದ ಮೇಲೆ ಯಾಕಿಲ್ಲ ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, ಹಾಸನ ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿಶೇಷ ಪ್ರೀತಿ, ಕಾಳಜಿ ತೋರಿಸುವ ಜೆಡಿಎಸ್ ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಏಕೆ ಅದೇ ಮಮಕಾರವನ್ನು ತೋರುವುದಿಲ್ಲ ಎಂದು ಆರೋಪಿಸಿದರು.