ಬೆಂಗಳೂರು: ಬಿಜೆಪಿಗೆ ಠಕ್ಕರ್ ನೀಡುವುದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಜೈ ಸೀತಾರಾಮ್ ಎಂದು ಘೋಷಣೆ ಕೂಗಿದ್ದಾರೆ.
ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಕುರಿತ ಚರ್ಚೆಯಲ್ಲಿ ಉತ್ತರಿಸಲು ಸಿದ್ದರಾಮಯ್ಯ ಮುಂದಾದ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿರೋಧ ಮಾಡಿತು. ಈ ಸರ್ಕಾರ ದೇಶದ್ರೋಹಿಗಳ ರಕ್ಷಣೆ ಮಾಡುತ್ತಿದೆ. ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲ. ನ್ಯಾಯ ಬೇಕು ಎಂದು ಘೋಷಣೆ ಕೂಗಿದರು. ಇದಕ್ಕೆ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಇವರು ಜೈ ಶ್ರೀರಾಮ್ ಅಂತಾರೆ. ನಾವು ಜೈ ಸೀತಾರಾಮ್ ಅನ್ನುತ್ತೇವೆ ಎಂದರು. ಇವರಿಗೆ ಜವಾಬ್ದಾರಿ ಇಲ್ಲ. ಬಜೆಟ್ ದಿನ ಹೊರಗೆ ಹೋಗಿದ್ದೆ ಇದಕ್ಕೆ ಸಾಭಿ. 1.20 ಲಕ್ಷ ಕೋಟಿ ಹಣ ಅಭಿವೃದ್ಧಿ ಕೆಲಸಗಳಿಗೆ ಕೊಟ್ಟಿದ್ದೀವಿ. ಗ್ಯಾರಂಟಿಗಳಿಗೆ 52,900 ಕೋಟಿ ಇಟ್ಟಿದ್ದೇವೆ. ಇದು ಇನ್ನೂ ಹೆಚ್ಚಾಗಬಹುದು. ಗ್ಯಾರಂಟಿಗಳಿಗೆ 56 ಸಾವಿರ ಕೋಟಿ ಆಗಬಹುದು. ವಿಪಕ್ಷಗಳ ಆರೋಪ ಸುಳ್ಳು. ಗ್ಯಾರಂಟಿಗಳಿಂದ ಅಭಿವೃದ್ಧಿ ಕೆಲಸ ಕುಂಠಿತ ಆಗಿಲ್ಲ. ಆಪಾದನೆ ಸತ್ಯಕ್ಕೆ ದೂರವಾಗಿದೆ ಎಂದು ಸೂಚಿಸಿದರು.
ಬಿಜೆಪಿ ಹಿಂದೆ ಅಧಿಕಾರದಲ್ಲಿದ್ದವರು. ಇವರ ನಡವಳಿಕೆ, ಲೂಟಿ ನೋಡಿ ತಿರಸ್ಕರಿಸಿದರು. 40% ಭ್ರಷ್ಟಾಚಾರ ನೋಡಿ ಜನ ತಿರಸ್ಕರಿಸಿದರು. 2008 ರಲ್ಲಿ ಗೆದ್ದಿದ್ದು 110 ಸ್ಥಾನ. ನಂತರ ಆಪರೇಷನ್ ಮೂಲಕ ಅಧಿಕಾರಕ್ಕೆ ಬಂದರು. ಹೀಗಾಗಿಯೇ ಇವರನ್ನು ಜನ ಛೀಮಾರಿ ಹಾಕಿದರು ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಈ ವೇಳೆ ಅಭಿವೃದ್ಧಿ ಕಾರ್ಯ ಹಾಗೂ ಅನುದಾನದ ಕುರಿತು ಸಿಎಂ ಮಾತನಾಡುತ್ತಿದ್ದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದರು. ಮೋದಿ ಇಲ್ಲವಾದರೆ ಬಿಜೆಪಿಯವರು ರಾಜಕೀಯವಾಗಿ ಅಶಕ್ತರು. ಬಿಜೆಪಿಯವರ ತಲೆ ಖಾಲಿ ಖಾಲಿ. ರಾಮಾಯಣವೂ ಇಲ್ಲ. ಮಹಾಭಾರತವೂ ಓದಿಲ್ಲ. ಯಾರೋ ಹೇಳಿದರು ಅಂತ ಇವರು ಮತನಾಡುತ್ತಾರೆ ಎಂದ ಸಿಎಂ ‘ಜೈ ಸೀತಾರಾಂ ಘೋಷಣೆ ಕೂಗಿದರು.
ಸ್ಪೀಕರ್ ಪೀಠದತ್ತ ಧರಣಿ ವೇಳೆ ಪೇಪರ್ ಹರಿದೆಸೆದು ಬಿಜೆಪಿ-ಜೆಡಿಎಸ್ ಸದಸ್ಯರು ಆಕ್ರೋಶ ಹೊರಹಾಕಿದರು. ಆ ವೇಳೆ ಸ್ಪೀಕರ್ ಗರಂ ಆಗಿ ಇದೇನು ಸದನವೋ ನಿಮ್ಹಾನ್ಸೋ ಗೊತ್ತಾಗ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.