ಲಡಾಖ್ ಗಡಿಯಿಂದ ಸೇನೆಯನ್ನು ಹಿಂದೆ ತೆಗೆದುಕೊಳ್ಳಲು ಒಪ್ಪಿದ ಚೀನಾ
ನವದೆಹಲಿ: ಭಾರತದ ಗಡಿಯಲ್ಲಿ ನಿಯೋಜನೆಗೊಂಡಿರುವ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಚೀನಾ ಹೇಳುವ ಮೂಲಕ ಕಳೆದ ಎರಡು ವರ್ಷಗಳಿಂದ ಭಾರತ-ಚೀನಾ ಮಧ್ಯೆ ಲಡಾಖ್ ವಿಚಾರವಾಗಿ ನಡೆಯುತ್ತಿದ್ದ ಸಂಘರ್ಷಕ್ಕೆ ಬ್ರೇಕ್ ಬೀಳಲಿದೆ.
ಗಡಿಯಲ್ಲಿ ಸಂಘರ್ಷ ನಡೆದ ಬಳಿಕ ಮೊದಲ ಬಾರಿಗೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಆಗಮಿಸಿದ್ದು, ಶುಕ್ರವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಾಂಗ್ ಯಿ ಸಭೆ ನಡೆಸಿದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಎರಡೂ ದೇಶಗಳು ಗಡಿಯಿಂದ ಪೂರ್ಣ ಪ್ರಮಾಣದಲ್ಲಿ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿವೆ.
ಮಾತುಕತೆಯ ವೇಳೆ ವಾಂಗ್ ಯಿ ಎರಡು ದೇಶಗಳ ಮಧ್ಯೆ ಇರುವ ಗಡಿ ವಿವಾದ ಬಗೆ ಹರಿಸಿಕೊಳ್ಳುವ ಸಂಬಂಧ ಅಜಿತ್ ದೋವಲ್ ಅವರನ್ನು ಚೀನಾಗೆ ಬರುವಂತೆ ಆಹ್ವಾನಿಸಿದರು. ಆದರೆ ಅಜಿತ್ ದೋವಲ್, ವಾಸ್ತವ ಗಡಿ ರೇಖೆ(ಎಲ್ಎಸಿ) ಬಳಿ ನಿಯೋಜನೆಗೊಂಡಿರುವ ಸೇನೆಯನ್ನು ಚೀನಾ ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಪಡೆದ ಬಳಿಕವಷ್ಟೇ ಭೇಟಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಂಪೂರ್ಣವಾಗಿ ಸೇನೆ ಹಿಂದಕ್ಕೆ ಪಡೆದು ಮೊದಲಿನ ಸ್ಥಿತಿ ನಿರ್ಮಾಣವಾಗಬೇಕು. ಮಾತುಕತೆಯ ಮೂಲಕ ವಿವಾದವನ್ನು ಇತ್ಯರ್ಥ ಮಾಡಬೇಕು ಎಂದು ಮಾತುಕತೆಯ ವೇಳೆ ಮನವರಿಕೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಾಂಗ್ಯಿ ಎರಡೂ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳೋಣ ಎಂದು ಹೇಳಿದ್ದಾರೆ. ಇದಕ್ಕೆ ಧೋವಲ್ ಸಹಮತ ವ್ಯಕ್ತಪಡಿಸಿದರು ಎಂದು ಎಂದು ಮೂಲಗಳು ತಿಳಿಸಿವೆ.
ಘರ್ಷಣೆಯ ಬಳಿಕ ಚೀನಾ ಮತ್ತು ಭಾರತದ ಸೇನಾ ಅಧಿಕಾರಿಗಳ ಮಧ್ಯೆ ಒಟ್ಟು 15 ಬಾರಿ ಸಭೆ ನಡೆದಿದೆ. 15 ಸಭೆಗಳಲ್ಲಿ ಸಾಧ್ಯವಾಗದ್ದು ಧೋವಲ್ ಮತ್ತು ವಾಂಗ್ ಯಿ ನಡುವಿನ ಒಂದೇ ಭೇಟಿಯಲ್ಲಿ ಸಾಧ್ಯವಾಗಿದೆ.