ನಾನು ಜಗ್ಗಲ್ಲ, ಬಗ್ಗಲ್ಲ : ಹೈಕಮಾಂಡ್ ವಿರುದ್ಧ ಸಿಡಿದು ನಿಂತ್ರಾ ರಾಜಾಹುಲಿ..?
ಬೆಂಗಳೂರು : ಬಿಜೆಪಿ ಹೈಕಮಾಂಡ್ ವಿರುದ್ಧ ಸಿಡಿದು ನಿಂತ್ರಾ ರಾಜಾಹುಲಿ..? “ಹೈಕಮಾಂಡ್ ಸೂಚಿಸಿದ್ರೆ ತಕ್ಷಣ ರಾಜೀನಾಮೆ ಸಿದ್ಧ” ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆ ಹಿಂದೆ ಇದ್ಯಾ ರಾಜಕೀಯ ತಂತ್ರಗಾರಿಕೆ..? ನಾನು ಯಾವುದಕ್ಕೂ ಬಗ್ಗಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ರಾ ಯಡಿಯೂರಪ್ಪ..?
ಹೌದು..! ರಾಜ್ಯದಲ್ಲಿ ಕೆಲ ದಿನಗಳಿಂದ ಕೇಳಿ ಬರುತ್ತಿದ್ದ ನಾಯಕತ್ವ ಬದಲಾವಣೆ ಬಗ್ಗೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೌನ ಮುರಿದಿದ್ದಾರೆ. “ಎಲ್ಲಿಯವರೆಗೆ ಅಧಿಕಾರದಲ್ಲಿ ಇರುವಂತೆ ಹೇಳುತ್ತಾರೋ ಅಲ್ಲಿಯವರೆಗೂ ನಾನು ಮುಂದುವರೆಯುತ್ತೇನೆ. ಹೈಕಮಾಂಡ್ ರಾಜೀನಾಮೆ ನೀಡುವಂತೆ ನನಗೆ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುತ್ತೇನೆ. ಆದರೆ ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇದೆ” ಎಂದಿದ್ದಾರೆ.
ನನಗೊಂದು ಅವಕಾಶ ಮಾಡಿಕೊಟ್ಟಿದ್ದಾರೆ, ಅದನ್ನು ಶಕ್ತಮೀರಿ ಸದುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಉಳಿದಿದ್ದು ಹೈಕಮಾಂಡ್ಗೆ ಬಿಟ್ಟ ವಿಚಾರ. ಆದ್ದರಿಂದ ನಾನು ಯಾವುದೇ ಗೊಂದಲದಲ್ಲಿ ಇಲ್ಲ ಎಂದು ಹೇಳುವ ಮೂಲಕ ಸಿಎಂ ಕುರ್ಚಿಯಿಂದ ಕೆಳಗಿಳಿಯಲು ನನಗೆ ಯಾವುದೇ ಅಭ್ಯಂತ್ರವಿಲ್ಲ ಎಂಬ ಸ್ಪಷ್ಟ ಸಂದೇಶವನ್ನ ಸಿಎಂ ಬಿಎಸ್ ವೈ ಸಾರಿದ್ದಾರೆ.
ಆದ್ರೆ ಸಿಎಂ ಬಿ.ಎಸ್.ವೈ ಈ ಹೇಳಿಕೆ ನೀಡಿದ್ದು ಯಾಕೆ..? ಎಂಬ ಪ್ರಶ್ನೆ ಇದೀಗ ರಾಜಕೀಯ ಚಿಂತಕರಲ್ಲಿ ಮನೆ ಮಾಡಿದೆ. ಯಾಕೆಂದ್ರೆ ಮೂಲಗಳ ಪ್ರಕಾರ ಸಿಎಂ ಬಿ.ಎಸ್.ಯಡಿಯೂರಪ್ಪ ಆರ್ಎಸ್ಎಸ್ ನಾಯಕರ ಮುಂದೆ ಈಗಾಗಲೇ ಚಾರ್ಜ್ಶೀಟ್ ಹಾಕಿ ಹಲವು ವಿಚಾರವನ್ನು ಪ್ರಸ್ತಾಪ ಮಾಡಿ ರಾಜೀನಾಮೆಗೆ ಸಿದ್ಧ ಎಂದಿದ್ದಾರಂತೆ.
ಚಾರ್ಜ್ ಶೀಟ್ ನಲ್ಲಿ ಸಾಕಷ್ಟು ವಿಚಾರಗಳನ್ನು ಪ್ರಸ್ತಾಪ ಮಾಡಿರುವ ಸಿಎಂ, ಸಿಎಂ ಬದಲಾವಣೆ ಬಗ್ಗೆ ಯತ್ನಾಳ್ ಹೇಳಿಕೆ ನೀಡುತ್ತಿದ್ದರೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಈಶ್ವರಪ್ಪ ರಾಜ್ಯಪಾಲರಿಗೆ ದೂರು ಕೊಟ್ಟಿದ್ದೇಕೆ..? ಸಿಪಿ ಯೋಗೇಶ್ವರ್ ನಾಯಕತ್ವದ ಬಗ್ಗೆ ಯಾಕೆ ಮಾತನಾಡುತ್ತಿದ್ದಾರೆ..? ಈ ಎಲ್ಲ ಬೆಳವಣಿಗೆಗಳಿಂದ ನನಗೆ ಮುಜುಗರ ಆಗುವುದಿಲ್ಲವಾ..? ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ನಾಳೆಯೇ ರಾಜೀನಾಮೆ ಕೊಡು ಅಂದರೆ ಕೊಡುತ್ತೇನೆ. ಆದರೆ ನನಗೆ ಅವಮಾನ ಮಾಡಿ ಕೆಳಗೆ ಇಳಿಸುತ್ತೇವೆ ಎಂದರೆ ನಾನು ಬಗ್ಗಲ್ಲ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಅದರ ಅರಿವು ನನಗಿದೆ. ಸಂಘದ ಶಿಸ್ತಿನ ಕಾರ್ಯಕರ್ತ ನಾನು, ಸಂಘ ಹೇಳಿದಂತೆ ಕೇಳುತ್ತೇನೆ ಎಂದು ಹೇಳಿದ್ದಾರಂತೆ.
ಬಿಎಸ್ ವೈ ಕೈ ಬಿಟ್ಟರೇ ಪಕ್ಷಕ್ಕೆ ಸಂಕಷ್ಟ..!
ಇದು ನೂರಕ್ಕೆ ನೂರಷ್ಟು ಸತ್ಯವಾದ ಮಾತು. ಈಗಾಗಲೇ ಒಂದು ಬಾರಿ ಇದು ಸಾಭೀತಾಗಿದೆ. ರಾಜ್ಯದಲ್ಲಿ ಬಿಎಸ್ ವೈ ಅಂದರೇ ಯಡಿಯೂರಪ್ಪ, ಯಡಿಯೂರಪ್ಪ ಅಂದ್ರೆ ಬಿಜೆಪಿ. ರಾಜ್ಯದಲ್ಲಿ ಕೇಸರಿ ಬಾವುಟ ಮತ್ತೆ ಹಾರಬೇಕು ಅಂದ್ರೆ ಯಡಿಯೂರಪ್ಪ ಪಕ್ಷದಲ್ಲೇ ಇರಬೇಕು. ಅವರನ್ನ ಪಕ್ಕಕ್ಕಿಟ್ಟು ರಾಜಕೀಯ ಚದುರಂಗ ಆಟವಾಡಲು ಸಾಧ್ಯವೇ ಇಲ್ಲ. ಒಂದು ವೇಳೆ ಸಿಎಂ ಬದಲಾವಣೆ ಆಗಿದ್ದೇ ಆದಲ್ಲಿ ರಾಜ್ಯ ಬಿಜೆಪಿ ಎರಡು ಭಾಗ ಆಗುವುದರಲ್ಲಿ ಸಂಶಯವೇ ಇಲ್ಲ.