ಬೆಂಗಳೂರು, ಮೇ 23 : ಲಾಕ್ ಡೌನ್ ನಿಂದ ಚಲನಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಕೆಲಸಗಳು ನಿಂತು ಹೋಗಿದ್ದು, ಇದರಿಂದ ಕಲಾವಿದರು, ಕ್ಯಾಮೆರಾ ಮಾನ್ಗಳು, ತಂತ್ರಜ್ಞರು ಸೇರಿದಂತೆ ಅನೇಕರು ಕೆಲಸವಿಲ್ಲದೆ ಒದ್ದಾಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಜಾಟಾಕೀಸ್ ಖ್ಯಾತಿಯ ನಟ ಸೃಜನ್ ಲೋಕೇಶ್ ಅವರು ಒಂದು ಹೊಸ ಪ್ರಯೋಗಕ್ಕೆ ವೇದಿಕೆ ಸಿದ್ಧಗೊಳಿಸಿದ್ದಾರೆ. ಜೊತೆಗೆ ಆತ್ಮನಿರ್ಭರ ಭಾರತಕ್ಕೆ ನಾವೆಲ್ಲಾ ಕೈ ಜೋಡಿಸೋಣ ಎಂಬ ಸಂದೇಶವನ್ನು ಸಾರಿದ್ದಾರೆ.
20 ಛಾಯಾಗ್ರಾಹಕರನ್ನು ಬಳಸಿಕೊಂಡು ಸೃಜನ್ ಲೋಕೇಶ್ ತಮ್ಮ ಮನೆಯಲ್ಲಿಯೇ ಒಂದು ಕ್ರಿಯೇಟಿವ್ ವಿಡಿಯೋವನ್ನು ತಯಾರಿಸಿದ್ದಾರೆ. ಈ ಮುಖಾಂತರ ಕ್ಯಾಮೆರಾ ವಿಭಾಗದವರಿಗೆ ಕೆಲಸ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋಗಳ ಮೂಲಕ ಮಹತ್ವದ ಸಂದೇಶಗಳನ್ನು ರವಾನಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಈ ವಿಡಿಯೋವನ್ನು ಹಂಚಿ ಕೊಂಡಿರುವ ಸೃಜನ್ ಲೋಕೇಶ್ ಈ ವಿಡಿಯೋಗೆ ಬನ್ನಿ ಮತ್ತೆ ದುಡಿಯೋಣ, ನಮ್ಮ ದೇಶವನ್ನ ಮತ್ತೆ ಕಟ್ಟೋಣ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.
beindianbuyindian ಎಂಬ ಹ್ಯಾಶ್ಟ್ಯಾಗ್ ನಲ್ಲಿ ಪೋಸ್ಟ್ ಮಾಡಿರುವ ಆ ವಿಡಿಯೋದಲ್ಲಿ ಸೃಜನ್ ಲೋಕೇಶ್, ಎಲ್ಲರಿಗೂ ನಮಸ್ಕಾರ, ಅಂದಿನಿಂದ ಇಂದಿನವರೆಗೆ ಎಂತಹ ಯುದ್ಧವೇ ಆಗಿರಲಿ, ಎಂತಹ ಸಂಕಷ್ಟನೇ ಆಗಿರಲಿ, ಈಗ ಕಾಡುತ್ತಿರುವ ಮಹಾಮಾರಿ ಕೊರೊನಾವೇ ಆಗಿರಲಿ.. ಸಮಸ್ಯೆಗೆ ಹೆದರಿಕೊಂಡು ಮುಂದಿಟ್ಟ ಹೆಜ್ಜೆಯನ್ನು ಹಿಂದಿಟ್ಟ ಇತಿಹಾಸ ನಮ್ಮ ಭಾರತದಲ್ಲಿ ಇಲ್ಲ. ಆರೋಗ್ಯವೇ ನಮ್ಮ ಭಾಗ್ಯ, ಇಷ್ಟು ದಿನ ದೇಹದ ಆರೋಗ್ಯಕ್ಕಾಗಿ ಹೋರಾಡಿದ್ದೇವೆ.
ಇನ್ನು ದೇಶದ ಸಂಪತ್ತಿಗೋಸ್ಕರ ಹೋರಾಡೋಣ ಎಂದು ಹೇಳಿದ್ದಾರೆ. ಹೂ, ಹಣ್ಣು, ತರಕಾರಿ ಯಾವುದೇ ಆಗಿರಲಿ, ದಿನ ಬಳಸುವ ವಸ್ತುಗಳಾಗಿರಲಿ, ಲೋಕಲ್ನಿಂದ ಗ್ಲೋಬಲ್ವರೆಗೂ ಬೆಳೆಯೋಣ. ಆತ್ಮನಿರ್ಭರ ಭಾರತಕ್ಕೆ ನಾವೆಲ್ಲಾ ಕೈ ಜೋಡಿಸೋಣ ಎಂಬ ಸಂದೇಶವನ್ನು ತಿಳಿಸಿದ್ದಾರೆ. ವಿಡಿಯೋದಲ್ಲಿ ತುಂಬಾ ಶಾಟ್ಗಳನ್ನು ತೆಗೆದಿರುವ ಬಗ್ಗೆ ಅವರು, ಇಷ್ಟು ಮಾತನ್ನು ಒಂದೇ ಶಾಟಿನಲ್ಲಿ ಹೇಳಬಹುದಿತ್ತು. ಆದ್ರೆ ಇಷ್ಟು ಶಾಟ್ ಕಟ್ ಯಾಕೆಂದು ಯೋಚನೆ ಮಾಡುತ್ತಿದ್ದೀರ. ಈ ಶಾಟ್ ಕಟ್ಗಳ ಹಿಂದೆಯೂ ಒಂದು ಕಥೆಯಿದೆ.
ಲಾಕ್ಡೌನ್ ಸಂದರ್ಭದಲ್ಲಿ ನಮ್ಮ ಕಲಾವಿದರು, ದಿನಗೂಲಿ ಕಾರ್ಮಿಕರು, ಟೆಕ್ನೀಷಿಯನ್ಸ್ ಸೇರಿದಂತೆ ಹಲವರಿಗೆ ಬಹಳ ಕಷ್ಟವಾಗಿತ್ತು. ಇದಕ್ಕೆ ಸ್ಪಂದಿಸಿ ಅನೇಕ ಜನರು ಸಹಾಯ ಮಾಡಿದ್ದಾರೆ. ಅವರಿಗೆಲ್ಲ ಧನ್ಯವಾದಗಳು, ಆದರೆ ನಮ್ಮ ಲೋಕೇಶ್ ಪ್ರೊಡಕ್ಷನ್ನಲ್ಲಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕರುಗಳು 10 ವರ್ಷದಿಂದ ನನ್ನ ಜೊತೆ ಇದ್ದವರು. ಇವರೆಲ್ಲರಿಗೂ ಏನಾದರೂ ನಾನು ಸಹಾಯ ಮಾಡಬೇಕೆಂದುಕೊಂಡೆ. ಆದರೆ ಅವರು, ನಮಗೆ ಸಹಾಯ ಮಾಡಬೇಕು ಎಂದು ಅನಿಸಿದರೆ ದಯವಿಟ್ಟು ಏನಾದರೂ ಕೆಲಸ ಕೊಡಿ ಎಂದರು. ಹಾಗಾಗಿ ಈ ವಿಡಿಯೋದಲ್ಲಿರುವ 20 ಶಾಟ್ಗಳನ್ನು ನನ್ನ 20 ಜನ ಕ್ಯಾಮೆರಾಮ್ಯಾನ್ಗಳು ಕಂಪೋಸ್ ಮಾಡಿ ಅವರ ಸಂಭಾವನೆಯನ್ನು ಅವರೇ ದುಡಿದಿದ್ದಾರೆ.
ಈ ಲಾಕ್ಡೌನ್ ಸಮಯದಲ್ಲಿ ನನ್ನ ಕೈಯಲ್ಲಿ ಅವರಿಗೆ ಈ ಒಂದು ಕೆಲಸ ಕೊಡಲು ಮಾತ್ರ ಸಾಧ್ಯವಾಯಿತು ಎಂದು ತಿಳಿಸಿದ್ದಾರೆ. ಈ ಬದುಕು ಭಗವಂತ ಹೇಳಿದ ಆ್ಯಕ್ಷನ್ ನಿಂದ ಶುರುವಾಗುತ್ತದೆ ಮತ್ತು ಅವನು ಹೇಳಿದ ಕಟ್ನಿಂದ ಕೊನೆಯಾಗುತ್ತದೆ. ಈ ಆ್ಯಕ್ಷನ್ ಕಟ್ ನಡುವಿನ ಜೀವನದಲ್ಲಿ ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡೋಣ. ಬನ್ನಿ ಮತ್ತೆ ನಾವೆಲ್ಲರೂ ಸೇರಿ ದುಡಿಯೋಣ, ನಮ್ಮ ದೇಶವನ್ನು ಮತ್ತೆ ಕಟ್ಟೋಣ ಎಂಬ ಸಂದೇಶ ನೀಡಿದ್ದಾರೆ.








