ಪ್ರಧಾನಿ ನರೇಂದ್ರ ಮೋದಿ, ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಂಗ್ರೆಸ್ ಫಸ್ಟ್ ಕ್ಷಮೆ ಬೇಡಲಿ. ರಾತ್ರಿ ಒಂದು, ಬೆಳಗ್ಗೆ ಒಂದು ಮಾತನಾಡುವ ಚಟ ಇರುವ ರಾಜಕಾರಣಿ ನಾನಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಗೂಡ್ಸೆ ಸಂತತಿಯ ಯತ್ನಾಳ್ ಸದನದಲ್ಲಿ ಇರಲು ನಾಲಾಯಕ್ ಎಂದಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ರಮೇಶ್ ಕುಮಾರ್ ಅವರ ಇತಿಹಾಸ ಏನು, ಎಷ್ಟು ಭೂ ಕಬಳಿಕೆ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಬಹಳ ಸಾಚಾ ಎಂಬಂತೆ ಮಾತನಾಡುತ್ತಾರೆ. ಸತ್ಯಹರಿಶ್ಚಂದ್ರನ 19ನೇ ಸಂತತಿಯವರಂತೆ ಮಾತನಾಡುತ್ತಾರೆ. ಮೊದಲು ಅವರು ತಮ್ಮ ಮನೆ ಸ್ವಚ್ಛ ಮಾಡಿಕೊಳ್ಳಲಿ ಎಂದು ಗುಡುಗಿದರು.
ನನ್ನ ಬಗ್ಗೆ ಮಾತಾಡುವ ನೈತಿಕತೆ ರಮೇಶ್ ಕುಮಾರ್ ಅವರಿಗೆ ಇಲ್ಲ. ಹಾಗೆಯೇ ನನ್ನ ಮೇಲೆ ನೀರಾವರಿ ಹೋರಾಟದ 23 ಕೇಸ್ ಗಳಿವೆಯೇ ಹೊರತು, ಭೂ ಕಬಳಿಕೆ, ಅತ್ಯಾಚಾರ, ನಕಲಿ ನೋಟ್ ಮಾಡಿರುವ ಪ್ರಕರಣಗಳಿಲ್ಲ. ರಮೇಶ್ ಕುಮಾರ್ ಅವರಿಂದ ಯಾವುದೇ ಆದರ್ಶ ತತ್ವ ಕಲಿಯುವ ಅವಶ್ಯಕತೆಯಿಲ್ಲ ಎಂದು ಯತ್ನಾಳ್ ಕಿಡಿಕಾರಿದ್ದಾರೆ.