ಕೊರೊನಾ ಅಪ್ ಡೇಟ್.. ನಾಳೆ ಪಿಎಂ ಮೀಟಿಂಗ್.. ಟಾಪ್ 10 ಸುದ್ದಿ
ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಲಂಗು ಲಗಾಮಿಲ್ಲದಂತೆ ಸಿಕ್ಕ ಸಿಕ್ಕವರ ದೇಹ ಹೊಕ್ಕಿ ಆರ್ಭಟಿಸುತ್ತಿದೆ. ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ 69 ಸಾವಿರಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಹೀಗಾಗಿ ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಶೇಕಡಾ 10ಕ್ಕೆ ಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರು ಕೊರೊನಾ ಹಾಟ್ ಸ್ಪಾಟ್ ಆಗಿ ಪರಿಣಮಿಸುತ್ತಿದೆ. ಮಂಗಳವಾರ 10 ಸಾವಿರದ ಗಡಿದಾಟಿದ್ದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ, ಇಂದು 15 ಸಾವಿರದ ಗಡಿದಾಟಿದೆ. ಇವತ್ತು ನಗರದಲ್ಲಿ 15,617 ಜನರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿದೆ. ಮಂಗಳವಾರ ಬೆಂಗಳೂರಿನಲ್ಲಿ 10800 ಕೇಸ್ ಗಳು ಪತ್ತೆಯಾಗಿದ್ದವು. ಇಂದಿನ ಪ್ರಕರಣಗಳೊಂದಿಗೆ ನಗರದಲ್ಲಿ ಪಾಸಿಟಿವಿಟಿ ದರ ಮತ್ತಷ್ಟು ಹೆಚ್ಚಾಗಿದೆ.
ರಾಜ್ಯದಲ್ಲಿ ಸಂಪೂರ್ಣವಾಗಿ ಶಾಲೆಗಳು ಬಂದ್ ಆಗಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಬೆಂಗಳೂರು, ಮೈಸೂರು, ಮಂಡ್ಯ ಬೆಳಗಾವಿ ಬಿಟ್ರೆ ಯಾವುದೇ ಬೇರೆ ಜಿಲ್ಲೆಗಳಲ್ಲಿ ಅಪಾಯ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿಲಾಗಿದ್ದು, ಅವರು ಪರಿಸ್ಥಿತಿ ನೋಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಕೊರೊನಾ ಮೂರನೇ ಅಲೆ ಜೋರಾಗಿದ್ದು, ಕಳೆದ ಕೆಲ ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿವೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಮುಖ್ಯವಾಗಿ ಅತಿ ಹೆಚ್ಚು ಸೋಂಕು ಪತ್ತೆಯಾಗುತ್ತಿರುವ ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಬಳಿ ವರದಿ ಕೇಳುವ ಸಾಧ್ಯತೆಗಳಿವೆ.
ಮೇಕೆದಾಟು ಪಾದಯಾತ್ರೆಯನ್ನು ಫುಲ್ ಜೋಷ್ ನಿಂದ ಆರಂಭಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಪದೇ ಪದೇ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಮೊನ್ನೆ ಸುಸ್ತು, ಮೈ ಕೈ ಕಾಲು ನೋವಿನಿಂದಾಗಿ ಬೆಂಗಳೂರಿಗೆ ಬಂದ್ ವಿಶ್ರಾಂತಿ ಪಡೆದು ಮತ್ತೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ಆದ್ರೆ ಇಂದು ಮತ್ತೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಇದೀಗ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಪರ್ವವೂ ಆರಂಭವಾಗಿದೆ. ಯೋಗಿ ಸರ್ಕಾರದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿಗೆ ರಾಜೀನಾಮೆ ನೀಡಿ ಇಂದು ಸಮಾಜವಾದಿ ಪಕ್ಷ ಸೇರಿದ್ದಾರೆ.
ಬರೋಬ್ಬರಿ 6 ವರ್ಷಗಳ ಬಳಿಕ ಆಸ್ಟ್ರೇಲಿಯಾದ ಮಿಚಲ್ ಸ್ಟಾರ್ಕ್ ಐಪಿಎಲ್ಗೆ ಕಂಬ್ಯಾಕ್ ಮಾಡುವ ಸೂಚನೆ ನೀಡಿದ್ದಾರೆ. ಐಪಿಎಲ್ ಸೀಸನ್ 15ರಲ್ಲಿ ಸ್ಟಾರ್ಕ್ ಆಡುವ ಸಾಧ್ಯತೆಗಳಿವೆ. ಆದರೆ ಸ್ಟಾರ್ಕ್ ಇಲ್ಲಿ ತನಕ ಹರಾಜಿಗೆ ತನ್ನ ಹೆಸರು ನೋಂದಾಯಿಸಿಕೊಂಡಿಲ್ಲ. ಒಂದು ವೇಳೆ ಸ್ಟಾರ್ಕ್ ಐಪಿಎಲ್ ಆಡಲು ಮನಸ್ಸು ಮಾಡಿದರೆ ಅವರ ಖರೀದಿಗಾಗಿ ಆರ್ಸಿಬಿ ಸೇರಿದಂತೆ ಎಲ್ಲಾ 10 ಫ್ರಾಂಚೈಸಿಗಳು ಪೈಪೋಟಿ ನಡೆಸುವುದು ಖಚಿತ.
15ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜಿಗೆ ಹೊಸ ದಿನಾಂಕ ನಿಗದಿಯಾಗಿದೆ. ಬಿಸಿಸಿಐ ಈ ಮೊದಲು ಫೆಬ್ರವರಿ 12 ಮತ್ತು 13ರಂದು ಆಟಗಾರರ ಹರಾಜನ್ನು ಬೆಂಗಳೂರಿನಲ್ಲಿ ನಡೆಸುವ ಪ್ಲಾನ್ ಮಾಡಿತ್ತು. ಆದರೆ ಕೊರೊನಾ ಕಾರಣದಿಂದ ಅದು ಮುಂದಕ್ಕೆ ಹೋಗುವ ಭಯ ಇತ್ತು. ಆದರೆ ಈಗ ಬಿಸಿಸಿಐ ದಿನಾಂಕ ಮತ್ತು ಜಾಗವನ್ನು ದೃಢ ಪಡಿಸಿದೆ. ಫೆಬ್ರವರಿ ಎರಡನೇ ವಾರ ಅಂದರೆ 11 ಮತ್ತು 12 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ. ಈ ಬಾರಿಯ ಹರಾಜಿಗೆ ಸಾವಿರಕ್ಕೂ ಅಧಿಕ ಆಟಗಾರರು ಹೆಸರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ.
ನಟ ಸಿದ್ದಾರ್ಥ, ಸೈನ ನೆಹ್ವಾಲ್ ಕುರಿತು ಮಾಡಿದ್ದ ಅವಹೇಳನಕಾರಿ ಟ್ವಿಟ್ ಕುರಿತಾಗಿ ಕ್ಷಮೆ ಯಾಚಿಸಿದ್ದಾರೆ. ಡಿಯರ್ ಸೈನಾ ನಾನು ನಿಮ್ಮ ಕುರಿತಾಗಿ ಕೆಟ್ಟ ಜೋಕ್ ಮಾಡಿದ್ದಕ್ಕೆ ಕ್ಷಮೆ ಕೋರುತ್ತೇನೆ. ನಾನು ಬಳಸಿರುವ ಪದಗಳನ್ನ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ಜೋಕ್ ಅನ್ನ ವಿವರಿಸಬೇಕಾದ ಸಂದರ್ಭ ಬರುತ್ತದೆ ಎಂದರೆ ಅದು ಒಳ್ಳೆಯ ಜೋಕ್ ಅಲ್ಲ. ಇದಕ್ಕಾಗಿ ನಾನು ಕ್ಷಮೆ ಕೇಳುತೇನೆ ಎಂದು ಸಿದ್ದಾರ್ಥ ಟ್ವೀಟ್ ಮಾಡಿದ್ದಾರೆ.
ನಟ ಅನೀಶ್ ತೇಜ್ವರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅನೀಶ್ ಜನುಮದಿನದ ಪ್ರಯುಕ್ತ ಅವರು ನಟಿಸಿ, ನಿರ್ಮಾಣ ಮಾಡಿರುವ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಡ್ಡ ಮೀಸೆ ಬಿಟ್ಟು ಖಡಕ್ ಲುಕ್ ನಲ್ಲಿ ಅನೀಶ್ ಮಿಂಚಿದ್ದಾರೆ. ಬೆಂಕಿ ಎಂಬ ಕ್ಯಾಚಿ ಟೈಟಲ್ ಇಟ್ಟು.. ಬೆಂಕಿಯಂತಹ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.