“ರಾಜ್ಯದ ಪರ ನಿಲ್ಲದ ಸಂಸದರು ನೀರಿಲ್ಲದ ಬಾವಿ ನೋಡಿಕೊಳ್ಳಲಿ”
ಬೆಂಗಳೂರು : ಕರ್ನಾಟಕಕ್ಕೆ ಆಕ್ಸಿಜನ್ ಪೂರೈಕೆ ಮಾಡದೇ ಪಕ್ಷಪಾತ ನಿಲುವು ತಾಳಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ತೀವ್ರ ಮುಖಭಂಗವಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಡಬಲ್ ಇಂಜಿನ್ ಸರ್ಕಾರಗಳಲ್ಲ ಇವು ಡಬಲ್ ಟ್ರಬಲ್ ಸರ್ಕಾರಗಳು ಎಂದು ಟೀಕಿಸಿದೆ.
ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ಡಬಲ್ ಇಂಜಿನ್ ಸರ್ಕಾರಗಳಲ್ಲ ಇವು ಡಬಲ್ ಟ್ರಬಲ್ ಸರ್ಕಾರಗಳು. ಮೋದಿ ಸರ್ಕಾರದ ಅನ್ಯಾಯದಿಂದ ರಾಜ್ಯದ ಜನತೆಯ ರಕ್ಷಣೆ ಹೈಕೋರ್ಟ್ ಬರಬೇಕಾಯ್ತು, ಸುಪ್ರೀಂ ಕೋರ್ಟ್ ಜೊತೆ ನಿಲ್ಲಬೇಕಾಯ್ತು. ನೆರೆ ಪರಿಹಾರದಿಂದ ಆಕ್ಸಿಜನ್ವರೆಗೂ ರಾಜ್ಯದ ಪರ ನಿಲ್ಲದ 25 ಸಂಸದರು ಅನಗತ್ಯ. ರಾಜೀನಾಮೆ ಕೊಟ್ಟು ಯಾವುದಾದರೂ ನೀರಿಲ್ಲದ ಬಾವಿ ನೋಡಿಕೊಳ್ಳಲಿ ಎಂದು ಆಕ್ರೋಶ ಹೊರಹಾಕಿದೆ.
ರಾಜ್ಯದ ಜನತೆಯ ಜವಾಬ್ದಾರಿ ಇದ್ದಿದ್ದು – 25 ಸಂಸದರಿಗೆ. ಜನತೆಯ ರಕ್ಷಣೆಯ ಹೊಣೆ ಇದ್ದಿದ್ದು – ರಾಜ್ಯ ಬಿಜೆಪಿ ಸರ್ಕಾರಕ್ಕೆ. ಕರ್ನಾಟಕದ ಮೇಲೆ ಆಕ್ಸಿಜನ್ ಯುದ್ಧ ಸಾರಿದ್ದ ಮೋದಿ ಸರ್ಕಾರದ ಯಾರೊಬ್ಬರೂ ಮಾತಾಡದೆ ಹೈಕೋರ್ಟ್, ಸುಪ್ರೀಂ ಕೋರ್ಟ್ಗಳು ನೆರವಿಗೆ ನಿಂತು, ಜನರ ಪರವಾಗಿ ಮಾತನಾಡುವ ಸ್ಥಿತಿ ಬಂದಿದ್ದು ಬಿಜೆಪಿ ಆಡಳಿತದ ಅಧೋಗತಿಗೆ ಸಾಕ್ಷಿ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಇನ್ನು ಕರ್ನಾಟಕಕ್ಕೆ ಆಕ್ಸಿಜನ್ ಪೂರೈಕೆ ಮಾಡದೇ ಪಕ್ಷಪಾತ ನಿಲುವು ತಾಳಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ತೀವ್ರ ಮುಖಭಂಗವಾಗಿದೆ. ಕರ್ನಾಟಕದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತೊಪಟ್ಟಿದ್ದ ಬಳಿಕ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಈ ಕುರಿತಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು.. ಅಲ್ಲದೇ ರಾಜ್ಯಕ್ಕೆ ಹೆಚ್ಚುವರಿ ಆಕ್ಸಿಜನ್ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತ್ತು. ಆದ್ರೆ ಹೈಕೋರ್ಟ್ ಆದೇಶಕ್ಕೆ ತಲೆಕೆಡಿಸಿಕೊಳ್ಳದ ಕೇಂದ್ರ ಆಮ್ಲಜನಕ ಪೂರೈಕೆ ಮಾಡದೇ ಇರುವ ನಿರ್ಧಾರ ಮಾಡಿತ್ತು. ಅಲ್ಲದೇ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆದ್ರೆ ಸುಪ್ರೀಂ ಕೋರ್ಟ್ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ. ಈ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.