ದೇಶ ವಾಸಿಯೋ ಎಚ್ಚರ… ಕೊರೊನಾ 3ನೇ ಅಲೆಯೂ ಅಪ್ಪಳಿಸಲಿದೆ..!
ನವದೆಹಲಿ : ದೇಶದಲ್ಲಿ ಮೊದಲ ಅಲೆಗಿಂತಲೂ ಅತಿ ಭಯಾನಕ ಸ್ವರೂಪ ಪಡೆದಿರುವ ಕೊರೊನಾ 2ನೇ ಅಲೆಯ ಪ್ರಕೋಪಕ್ಕೆ ಜನ ತತ್ತರಿಸಿಹೋಗಿದ್ದಾರೆ. ದಿನೇ ದಿನೇ ಸೋಂಕಿತರು ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ನಡುವೆ ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರರಾದ ವಿಜಯರಾಘವನ್ ಅವರು ಮತ್ತೊಂದು ಆಘಾತಕಾರಿ ಮಾಹಿತಿ ನೀಡಿದ್ಧಾರೆ.
ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯು ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತದಲ್ಲಿ ಸಾಂಕ್ರಾಮಿಕತೆಯನ್ನು ಹೆಚ್ಚಿಸಿ ಸಾವಿರಾರು ಜನರ ಸಾವಿಗೆ ಕಾರಣವಾಗುತ್ತಿರುವ ಹೊಸ ವೈರಸ್ ತಳಿಗಳನ್ನು ಎದುರಿಸಲು ಲಸಿಕೆಗಳನ್ನು ಅಪ್ಡೇಟ್ ಮಾಡುವ ಅಗತ್ಯವಿದೆ ಎಂದು ಎಚ್ಚರಿಸಿದ್ದಾರೆ.
ವೈರಸ್ ಪ್ರಸಾರವಾಗುತ್ತಿರುವ ಅಧಿಕ ಮಟ್ಟವನ್ನು ನೋಡಿದರೆ 3ನೇ ಹಂತ ಅಪ್ಪಳಿಸಲಿದೆ ಎನಿಸುತ್ತದೆ. ಆದರೆ ಯಾವ ಕಾಲಾವಧಿಯಲ್ಲಿ ಈ ಮೂರನೇ ಹಂತ ಸಂಭವಿಸಲಿದೆ ಎಂಬುದು ಸ್ಪಷ್ಟವಾಗಿಲ್ಲ. ನಾವು ಹೊಸ ಅಲೆಗಳಿಗೆ ತಯಾರಾಗಬೇಕು. ಪರಿಸ್ಥಿತಿಯ ಮೇಲೆ ನಿರಂತರ ಕಣ್ಗಾವಲು ಇಡುವುದರೊಂದಿಗೆ ಲಸಿಕೆಯ ನವೀಕರಣ ಕೂಡ ಅಗತ್ಯವಾಗಿದೆ ಎಂದು ಡಾ. ಕೆ.ವಿಜಯರಾಘವನ್ ಹೇಳಿದ್ದಾರೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 4,12,262 ಕೇಸ್ ಗಳು ಪತ್ತೆಯಾಗಿದ್ದರೆ, 3,980 ಮಂದಿ ವೈರಸ್ ನಿಂದಾಗಿ ಪ್ರಾಣಬಿಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲೀಗ ಕೋವಿಡ್ ಸೋಂಕಿತರ ಸಂಖ್ಯೆ 2,10,77,410ಕ್ಕೆ ಹಾಗೂ ಮೃತರ ಸಂಖ್ಯೆ 2,30,168ಕ್ಕೆ ಹೆಚ್ಚಳವಾಗಿದೆ. ಬುಧವಾರ ಒಂದೇ ದಿನ 3,29,113 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ ಭಾರತದಲ್ಲಿ 1,72,80,844 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲೀಗ ಸಕ್ರಿಯ ಪ್ರಕರಣಗಳ ಸಂಖ್ಯೆ 35,66,398ಕ್ಕೆ ಏರಿಕೆಯಾಗಿದೆ.