ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಅವರು ಮೊದಲ ದಿನವೇ ತಮ್ಮ ಆಡಳಿತದ ಹಾದಿ ಮತ್ತು ವೇಗ ಹೇಗಿರಲಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕುರ್ಚಿ ಏರಿದ ಬೆನ್ನಲ್ಲೇ ಸಚಿವರ ತುರ್ತು ಸಭೆ ಕರೆದ ಸಿಎಂ, ಪ್ರತಿಯೊಬ್ಬರಿಗೂ ಖಡಕ್ ಎಚ್ಚರಿಕೆ ನೀಡುವ ಮೂಲಕ ಇಡೀ ಸಚಿವ ಸಂಪುಟಕ್ಕೆ ನಡುಕ ಹುಟ್ಟಿಸಿದ್ದಾರೆ.
ಸಚಿವರು ಇನ್ನು ಮುಂದೆ ಹಗಲು ರಾತ್ರಿ ಎನ್ನದೆ 24/7 ಸಕ್ರಿಯವಾಗಿ ಕೆಲಸ ಮಾಡಲೇಬೇಕು ಎಂಬುದು ಸಿಎಂ ನೀಡಿರುವ ಮೊದಲ ಆದೇಶ. ರಾಜ್ಯದ ಅಭಿವೃದ್ಧಿ ಮತ್ತು ಜನರ ಕೆಲಸಗಳ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಮೈಗಳ್ಳತನ ಅಥವಾ ಆಲಸ್ಯವನ್ನು ಸಹಿಸುವುದಿಲ್ಲ. ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವುದು ನನ್ನ ಮೊದಲ ಆದ್ಯತೆ. ಯಾರು ಕೆಲಸ ಮಾಡುವುದಿಲ್ಲವೋ ಅಂತವರಿಗೆ ನನ್ನ ಸಂಪುಟದಲ್ಲಿ ಜಾಗವಿಲ್ಲ ಎಂದು ನೇರವಾಗಿಯೇ ಗುಡುಗಿದ್ದಾರೆ.
ಕೇವಲ ಬೆಂಗಳೂರಿನ ವಿಧಾನಸೌಧ ಅಥವಾ ಎಸಿ ರೂಮ್ಗಳಿಗೆ ಸೀಮಿತವಾಗುವ ಸಚಿವರಿಗೆ ಡಿಕೆಶಿ ಬ್ರೇಕ್ ಹಾಕಿದ್ದಾರೆ. ಎಲ್ಲ ಸಚಿವರು ಮತ್ತು ಶಾಸಕರು ಕಡ್ಡಾಯವಾಗಿ ತಮಗೆ ನಿಯೋಜಿಸಲಾದ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಜನರ ಮನೆ ಬಾಗಿಲಿಗೆ ಹೋಗಿ ಅವರ ಕಷ್ಟಗಳನ್ನು ಆಲಿಸಬೇಕು. ಕಡತಗಳ ವಿಲೇವಾರಿಯಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ತಮ್ಮ ಶಿಸ್ತು ಮತ್ತು ಕಟ್ಟುನಿಟ್ಟಿನ ನಿರ್ಧಾರಗಳಿಗೆ ಹೆಸರಾದವರು. ಅದನ್ನು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಸಾಬೀತುಪಡಿಸಿದ್ದಾರೆ. ನನ್ನ ಆದೇಶಗಳನ್ನು ಗಾಳಿಗೆ ತೂರಿ ಹಗುರವಾಗಿ ಪರಿಗಣಿಸಿದರೆ ಶಿಸ್ತು ಕ್ರಮ ಜರುಗಿಸಲು ನಾನು ಹಿಂದೆ ಮುಂದೆ ನೋಡುವುದಿಲ್ಲ ಎಂದು ಎಚ್ಚರಿಸುವ ಮೂಲಕ ಅಧಿಕಾರಿಗಳು ಮತ್ತು ಸಚಿವರಿಗೆ ಬೆವರಿಳಿಸಿದ್ದಾರೆ. ಒಟ್ಟಿನಲ್ಲಿ ಡಿಕೆಶಿ ಅವರ ಈ ಆಕ್ಷನ್ ಮೋಡ್ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಆಡಳಿತ ಯಂತ್ರಕ್ಕೆ ಹೊಸ ಕಳೆ ಬಂದಂತಿದೆ.








