D K Shivakumar | ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿದ್ದ ಒಗ್ಗಟ್ಟು ಚೂರು
ಬೆಂಗಳೂರು : . ಬಿಜೆಪಿಯವರು ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿದ್ದ ಒಗ್ಗಟ್ಟು ಚೂರಾಗಿದೆ. ಭಾರತದ ಸಮಾಜಗಳು ಚೂರಾಗಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ್ ಅರಸು ಅವರ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಬಳಿಕ ರಾಜೀವ್ ಗಾಂಧಿ, ದೇವರಾಜ ಅರಸು ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ರಾಜ್ಯಕ್ಕೆ ದೇಶಕ್ಕೆ ಧೀಮಂತ ನಾಯಕರನ್ನು ಕೊಟ್ಟ ಸುದಿನವಿದು. ಒಂದು 20 ವರ್ಷದ ಹಿಂದೆ ಇದೇ ದಿನ ಗಂಗೂಲಿ, ಸಚಿನ್ ಮತ್ತು ಎಲ್ಲಾ ಕ್ರಿಕೆಟ್ ತಂಡವನ್ನು ಕರೆಸಿ ಪ್ಯಾಲೇಸ್ ನಲ್ಲಿ 50 ಸಾವಿರ ಜನರನ್ನು ಸೇರಿಸಿ ರಾಜ್ಯ ಯುವ ಸಂಘಟನೆಯನ್ನು ನಾವು ಸರ್ಕಾರದ ಪರವಾಗಿ ಮಾಡಿದ್ದೇವು. ದೇವರಾಜ ಅರಸು ಮತ್ತು ರಾಜೀವ್ ಗಾಂಧಿ ಅವರು ಈ ರಾಜ್ಯಕ್ಕೆ ದೇಶಕ್ಕೆ ಕೊಟ್ಟಂತಹ ಕೊಡುಗೆಯನ್ನು ನಾವು ಮೆಲುಕು ಹಾಕಬೇಕು. ರಾಜೀವ್ ಗಾಂಧಿ ಅವರಿಗೆ ಆಕಸ್ಮಿಕವಾಗಿ ಪ್ರಧಾನಿ ಹುದ್ದೆ ಸಿಕ್ತು. ಅವರ ರಾಜಕೀಯ ಜೀವನ ಶುರುವಾಗಿದ್ದೇ ಬೆಂಗಳೂರಿನಿಂದ ಎಂದು ನೆನಪು ಮಾಡಿಕೊಂಡರು.
ಈ ದೇಶಕ್ಕೆ ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕರು ಬೇಕು. A leader one who creates leaders not followers ಅಂತಾ ರಾಜೀವ್ ಗಾಂಧಿ ಅವರು ಹೇಳುತ್ತಿದ್ದರು. ಹಾಗೇ ನಾನು ಕೂಡ ರಾಜೀವ್ ಗಾಂಧಿ ಅವರ ಅಭಿಮಾನಿಯಾಗಿ ಈ ಹಂತಕ್ಕೆ ಬಂದು ನಿಂತಿದ್ದೇನೆ. ಹೆಣ್ಣುಮಕ್ಕಳು ಹೆಚ್ಚು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮತದಾನದ ಹಕ್ಕನ್ನು 21 ವರ್ಷದಿಂದ 18ಕ್ಕೆ ಇಳಿಸಿದಾಗ ಬಿಜೆಪಿ ಸೇರಿದಂತೆ ವಿಪಕ್ಷಗಳು ವಿರೋಧಿಸಿದ್ದರು. ಬಾಯಿಗೆ ಬಂದಂತೆ ಮಾತನಾಡಿದ್ದವು. ಆದ್ರೆ ಈ ದೇಶದ ಯುವಕರ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸವನ್ನಿಟ್ಟು ಮತದಾನ ಮಾಡುವ ವಯೋಮಿತಿಯನ್ನು 18ಕ್ಕೆ ಇಳಿಸಿದರು, ಇದನ್ನ ಯಾರೂ ಕೂಡ ಮರೆಯಬಾರದು. ಸಂಪರ್ಕ ಕ್ಷೇತ್ರದಲ್ಲಿ ಬದಲಾವಣೆ ಬರಲು ರಾಜೀವ್ ಗಾಂಧಿ ಅವರು ಕಾರಣ. ದೇವರಾಜ ಅರಸು ರಾಜೀವ್ ಗಾಂಧಿಯವರದ್ದು ಒಂದೆ ಚಿಂತನೆ ಆಗಿತ್ತು ಎಂದು ವಿವರಿಸಿದರು.
![d-k-shivakumar-After BJP came to power the unity in the country was shattered saaksha tv](http://saakshatv.com/wp-content/uploads/2022/08/bangaloe-sid.jpg)
ಇದೇ ವೇಳೆ ನೆಹರು ಫೋಟೋ ವಿಚಾರವನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದ ಡಿಕೆಶಿವಕುಮಾರ್, ಈ ದೇಶದ ಇತಿಹಾಸವನ್ನು ಯಾವುದೇ ಕಾರಣಕ್ಕೂ ನಿಮ್ಮ ಪಾರ್ಟಿಯವರು ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ. ನಿಮ್ಮ ಪಕ್ಷದವರು ಯಾರಾದ್ರೂ ಜೈಲಿನಲ್ಲಿ ಇದ್ದರಾ..? ಇಂದಿರಾಗಾಂಧಿ ಅವರು ಗುಂಡೇಟು ತಿಂದರು. ನೆಹರು ಕುಟುಂಬ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ. ಈ ಕುಟುಂಬದ ಇತಿಹಾಸವನ್ನು ಅಳಸಿ ಹಾಕಲು ಹೊರಟ್ಟಿದ್ದೀರಲ್ವಾ ಮಿಸ್ಟರ್ ಬೊಮ್ಮಾಯ್, ಅದು ಸಾಧ್ಯವೇ ಇಲ್ಲ ಎಂದು ಆಕ್ರೋಶ ಹೊರಹಾಕಿದರು.
ದೇವರಾಜು ಅರಸು ಅವರು ಕರ್ನಾಟಕದಲ್ಲಿ ಮಾಡಿದ ಭೂಸುಧಾರಣೆ ಕಾಯ್ದೆಯನ್ನು ಇಂದಿರಾ ಗಾಂಧಿ ಅವರು ಇಡೀ ದೇಶ ವ್ಯಾಪಿ ಜಾರಿಗೆ ತಂದರು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ನೆರೆಹೊರೆ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಸಾಧಿಸಿದ್ದರು. ಆದ್ರೆ ಈಗ ಏನಾಗಿದೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಬಿಜೆಪಿಯವರು ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿದ್ದ ಒಗ್ಗಟ್ಟು ಚೂರಾಗಿದೆ. ಭಾರತದ ಸಮಾಜಗಳು ಚೂರಾಗಿವೆ ಎಂದು ಗುಡುಗಿದರು.
ಕಾರ್ಪೋರೇಶನ್ ಎಲೆಕ್ಷನ್ ಮೀಸಲಾತಿ ಅವರಿಗೆ ಬೇಕಾದಂತೆ ಮಾಡಿದ್ದಾರೆ. 2ವರ್ಷ ಬೇಕಿತ್ತಾ, ಎಲೆಕ್ಷನ್ ಮಾಡಬೇಕಿತ್ತು. ಮಾನಗೆಟ್ಟವರು ಚಿಕ್ಕಪೇಟೆಯಲ್ಲಿನ ಸ್ಕೂಲ್ ನ ವ್ಯಾಪಾರಕ್ಕೆ ಇಟ್ಟಿದ್ದಾರೆ. ಯಾಕೆ ಆಸ್ತಿಗಳನ್ನ ಮಾರಲು ಮುಂದಾಗಿದ್ದೀರಿ.. ? ಇದು ನಿಮ್ಮ ನೀತಿನಾ..? ಇಡೀ ಪ್ರಪಂಚದಲ್ಲಿ ನೀವು ಕ್ಷುಲ್ಲಕ ರಾಜಕಾರಣ ಮಾಡಿಕೊಳ್ಳುತ್ತಾ ಬರುತ್ತಿದ್ದೀರಾ ಎಂದು ಪ್ರಶ್ನಿಸಿದರು.
ದೇವರಾಜ್ ಅರಸು ಅವರು ಯುವ ನಾಯಕರನ್ನು ತಯಾರು ಮಾಡಿದರು. ಯುವಕರಲ್ಲಿ ಶಕ್ತಿ ತುಂಬಿದರು. ಅರಸು ಅವರ ಚಿಂತನೆಯೇ ರಾಜೀವ್ ಗಾಂಧಿ ಅವರು ಚಿಂತನೆಯಾಗಿತ್ತು. ಯಾರೂ ಒಗ್ಗಟ್ಟಿನಿಂದ ಮುನ್ನುಗ್ಗೋಣ, ಬಿಜೆಪಿ ಅವರು ತಿಪ್ಪರಲಾಗ ಹೊಡೆದರೂ 60 ಸೀಟುಗಳನ್ನು ಗೆಲ್ಲೋಕೆ ಆಗಲ್ಲ, ಹಾಗಂತ ಅವರ ನಾಯಕರೇ ಹೇಳುತ್ತಿದ್ದಾರೆ. 66ರ ಮೇಲೆ ನಮ್ಮ ತಕ್ಕಡಿ ಮೇಲೆ ಏಳ್ತಿಲ್ಲ ಅಂತ ಬಿಜೆಪಿ ನಾಯಕ ನನಗೆ ಹೇಳಿದ್ದಾನೆ. ಹಾಗಂತ ಮೈಮರೆಯಬೇಡಿ, ನಾವೆಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದು ಕರೆಕೊಟ್ಟರು.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳಾದ ರಾಮಲಿಂಗಾ ರೆಡ್ಡಿ, ಸಲೀಮ್ ಅಹಮ್ಮದ್, ಈಶ್ವರ್ ಖಂಡ್ರೆ, ಸೇರಿದಂತೆ ಪಕ್ಷದ ನಾಯಕರು, ಮುಖಂಡರುಗಳು ಭಾಗವಹಿಸಿದ್ದರು. ಕೆಪಿಸಿಸಿ ಒಬಿಸಿ ವಿಭಾಗದ , ಉತ್ತರ, ಕೇಂದ್ರ, ದಕ್ಷಿಣ ಜಿಲ್ಲಾ ಅಧ್ಯಕ್ಷರಾದ ವಿ ರಾಜಣ್ಣ,ಓ ಮಂಜುನಾಥ, ಎಂ ವೆಂಕಟೇಶ ಹಾಗೂ ಆಪಲ್ ನಾಗರಾಜು ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.