ಬೆಂಗಳೂರು: ಅಪ್ಪ ಹೃದಯಾಘಾತದಿಂದ ಸಾವಪ್ಪನ್ನಪ್ಪಿದರು. ಅಪ್ಪನ ಅಂತ್ಯಸಂಸ್ಕಾರ ಮುಗಿಸಿ ಬಂದ ಮಗನಿಗೂ ಹೃದಯಾಘಾತವಾಗಿ ಆತನೂ ಇಹಲೋಕ ತ್ಯಜಿಸಿದ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ತಾಯಿಯೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 9 ಲಕ್ಷ ಬಿಲ್ ಕೊಟ್ಟು ಹಣ ಕೊಡಿ, ತಾಯಿಯ ಮೃತ ದೇಹ ತಗೊಂಡು ಹೋಗಿ ಎಂದಿತು ಖಾಸಗಿ ಆಸ್ಪತ್ರೆ..!
ಹೌದು, ಇದು ಬೆಂಗಳೂರಿನಲ್ಲಿ ನಡೆದ ಕುಟುಂಬವೊಂದರ ಕರುಣಾಜನಕ ಕಥೆ. ನಾಲ್ಕೈದು ದಿನಗಳ ಅವಧಿಯಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಬೊಮ್ಮನಹಳ್ಳಿ ಅಫ್ರೋಜ್ ಎಂಬುವರ ತಾಯಿಗೆ ಎರಡು ದಿನಗಳ ಹಿಂದೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರನ್ನು ಐಟಿಪಿಎಲ್ನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಮೊದಲು ಮಹಿಳೆಯನ್ನು ಸಾಮಾನ್ಯ ವಾರ್ಡ್ನಲ್ಲಿ ಇರಿಸಲಾಗಿತ್ತು. ಮಾರನೇ ದಿನವೇ ಮಹಿಳೆಯನ್ನು ಐಸಿಯುಗೆ ಶಿಫ್ಟ್ ಮಾಡಬೇಕು ಎಂದು ಆಸ್ಪತ್ರೆಯವರು ಹೇಳಿದ್ದಾರೆ. ಕಾರನಲ್ಲಿ ಆಸ್ಪತ್ರೆಗೆ ಬರುತ್ತಿದ್ದ ಮಹಿಳೆಯ ಪತಿ ಐಸಿಯುನ ಬಿಲ್ ಕೇಳಿ ಆಘಾತದಿಂದ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತ ತಂದೆಯ ಅಂತ್ಯಸಂಸ್ಕಾರ ನಡೆಸಿದ ಎರಡು ದಿನಗಳ ಬಳಿಕ ಮಗ ಅಫ್ರೋಜ್ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದಾದ ಮಾರನೇ ದಿನವೇ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೂವರ ಸಾವಿನ ಆಘಾತದಿಂದ ಆ ಕುಟುಂಬ ತತ್ತರಿಸಿ ಹೋದ ಬೆನ್ನಲ್ಲೇ, ಖಾಸಗಿ ಆಸ್ಪತ್ರೆ ಮಹಿಳೆಯ ಶವ ಕೊಡಲು ಹಿಂದೇಟು ಹಾಕಿದೆ. ಮಹಿಳೆ ಗುರುವಾರವೇ ಮೃತಪಟ್ಟಿದ್ದರೂ, 9 ಲಕ್ಷ ಬಿಲ್ ಕಟ್ಟಿ ಹೆಣ ತಗೊಂಡು ಹೋಗಿ ಎಂದು ಪಟ್ಟು ಹಿಡಿದಿದೆ ಎಂದು ಆರೋಪಿಸಲಾಗಿದೆ.
ಮಹಿಳೆ ಮೃತಪಟ್ಟ ನಂತರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ. ಮಹಿಳೆ ಸತ್ತು ಒಂದು ದಿನವಾದರೂ ತಾಯಿಯ ಮುಖ ನೋಡಲು ಆಸ್ಪತ್ರೆಯವರು ಬಿಟ್ಟಿಲ್ಲ. 9 ಲಕ್ಷ ಹಣ ಕೊಡದ ಹೊರತು ಹೆಣ ಕೊಡುವುದಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಸತಾಯಿಸುತ್ತಿದ್ದಾರೆ. ಶವಕ್ಕಾಗಿ ಸಂಬಂಧಿಕರು 24 ಗಂಟೆಗಳಿಂದ ಆಸ್ಪತ್ರೆ ಮುಂದೆ ಕಾದು ಕುಳಿತಿದ್ದಾರೆ ಎಂದು ಮೃತರ ಕುಟುಂಬಸ್ಥರ ಆರೋಪವಾಗಿದೆ.
ಈ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಆಸ್ಪತ್ರೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೊನೆಗೆ ಮೃತದೇಹವನ್ನು ಕೊಡುವುದಾಗಿ ಆಸ್ಪತ್ರೆ ಒಪ್ಪಿಕೊಂಡಿದೆ ಎನ್ನಲಾಗಿದೆ.