Dāvaṇagere | ಮುರುಘಾ ಶರಣರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಪ್ರತಿಭಟನೆ
ದಾವಣಗೆರೆ : ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಲಾಗಿದೆ.
ಅಂತೆಯೇ ಈ ಪ್ರಕರಣದ ಇತರ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲರಿಗೆ ದಾವಣಗೆರೆ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ದಾವಣಗೆರೆ ಜಯದೇವ ವೃತ್ತದಲ್ಲಿ ಪ್ರತಿಭಟಿಸಿದ ಪ್ರತಿಭಟನಾಕಾರರು ಮಠದ ಶರಣರ ವಿರುದ್ದ ಘೋಷಣೆ ಕೂಗಿದರು.
ಶಿವಮೂರ್ತಿ ಮುರುಘ ಶರಣರು ರಾಜ್ಯದ ಪ್ರತಿಷ್ಟಿತ ಮಠದ ಮುಖ್ಯಸ್ಥರಾಗಿರುವುದರಿಂದ ಮತ್ತು ಆರೋಪಿಗಳೆಲ್ಲರೂ ಅತ್ಯಂತ ಪ್ರಭಾವಿಗಳಾಗಿರುವುದರಿಂದ ಪೋಲಿಸ್ ಇಲಾಖೆ ಇದುವರೆಗೆ ಆರೋಪಿತರ ಮೇಲೆ ಯಾವುದೇ ವಿಚಾರಣಾ ಕ್ರಮಗಳನ್ನು ಕೈಗೊಂಡಿರುವುದಿಲ್ಲ.
ಬದಲಿಗೆ ಸಂತ್ರಸ್ಥೆಯರ ಖಾಸಗಿತನವನ್ನು ಕಾಪಾಡದೆ ಅವರನ್ನು ಭಯಗೊಳಿಸುವ ರೀತಿಯಲ್ಲಿ ಮಠದ ಸಾವಿರಾರು ಭಕ್ತರ ನಡುವೆ ಕರೆದುಕೊಂಡು ಹೋಗಿ ಸ್ಥಳ ಮಹಜರ್ ಮಾಡಲಾಗಿದೆ.

ಅಲ್ಲದೇ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಿಯಮ 164 ರ ಅಡಿಯಲ್ಲಿ ಅವರ ಹೇಳಿಕೆ ಪಡೆಯಲಾಗಿದೆ. ಇಂತಹ ಕ್ರಮಗಳಿಂದ ಸಂತ್ರಸ್ಥೆಯರಿಗೆ ನ್ಯಾಯ ಸಿಗುವುದರ ಬಗ್ಗೆ ಅನುಮಾನ ಮೂಡಿದೆ.
ಇವುಗಳೆಲ್ಲದರ ನಡುವೆ ರಾಜ್ಯದ ಮುಖ್ಯಮಂತ್ರಿ, ಗೃಹಮಂತ್ರಿ, ಸಚಿವ-ಶಾಸಕರಾದಿಯಾಗಿ ಅನೇಕರು ಶರಣರ ಪರವಾದ ಹೇಳಿಕೆಯನ್ನು ಮಾದ್ಯಮಗಳ ಮೂಲಕ ನೀಡುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಆದ್ದರಿಂದ ಇಂಥಹ ಹೇಳಿಕೆ ನೀಡಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಾಗಿದೆ. ದಿನಾಂಕ 01-09-2022 ರಂದು ಶಿವಮೂರ್ತಿ ಶರಣರನ್ನು ಬಂಧಿಸಲಾಗಿದೆ.
ಅಂತೆಯೇ ಈ ಪ್ರಕರಣದ ಇತರ ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕಾಗಿದೆ.
ಪ್ರಕರಣದ ತನಿಖೆಯು ಪಾರದರ್ಶಕವಾಗಿ ನಡೆಯಬೇಕೆಂಬ ಕಾರಣಕ್ಕೆ ಈ ಪ್ರಕರಣವನ್ನು ಸಿ ಬಿ ಐ ಗೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಅಲ್ಲದೆ ಸಂತ್ರಸ್ಥ ಬಾಲಕಿಯರ ಮುಂದಿನ ವಿದ್ಯಾಭ್ಯಾಸದ ಹೊಣೆಯನ್ನು ಸರ್ಕಾರವೇ ವಹಿಸಿಕೊಂಡು ಅವರ ‘ವಿದ್ಯಾಭ್ಯಾಸ ಮುಗಿದ ನಂತರ ಅವರಿಗೆ ಸರ್ಕಾರಿ ನೌಕರಿ ನೀಡಬೇಕು ಹಾಗೂ ಸಂತ್ರಸ್ತರಿಗೆ ತಲಾ 1 ಕೋಟಿ ದೂ. ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.








