ಕರ್ನಾಟಕ ಹೈಕೋರ್ಟ್ ನ 6 ಜನ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿ, 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
50 ಲಕ್ಷ ರೂ. ಅನ್ನು ಪಾಕಿಸ್ತಾನದ ಬ್ಯಾಂಕ್ ಅಕೌಂಟ್ಗೆ ಹಾಕಿ ಎಂದು ದುಷ್ಕರ್ಮಿಗಳು ಹೇಳಿದ್ದಾರೆ ಎನ್ನಲಾಗಿದ್ದು, ಪಾಕಿಸ್ತಾನದ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಹೈಕೋರ್ಟ್ನ ಸಾರ್ವಜನಿಕ ಸಂಪರ್ಕ ಅಧಿಕಾರಿ (ಪಿಆರ್ಒ) ಕೆ ಮುರಳೀಧರ್ ಅವರ ವಾಟ್ಸ್ ಆಪ್ ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ಅಪರಿಚಿತ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾನೆ. ದುಬೈ ಗ್ಯಾಂಗ್ ಮೂಲಕ ತಮ್ಮನ್ನು ಸೇರಿ ಆರು ಜನ ಹೈಕೋರ್ಟ್ ನ್ಯಾಯಾಧೀಶರನ್ನು ಕೊಲ್ಲುವುದಾಗಿ ವಾಟ್ಸ್ಆಪ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಮುರಳೀಧರ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್, ಎಚ್.ಟಿ. ನರೇಂದ್ರ ಪ್ರಸಾದ್, ಅಶೋಕ್ ಜಿ ನಿಜಗಣ್ಣವರ್, ಎಚ್ಪಿ ಸಂದೇಶ್, ಕೆ ನಟರಾಜನ್ ಹಾಗೂ ಬಿ. ವೀರಪ್ಪ ಅವರ ಹೆಸರು ಸಂದೇಶದಲ್ಲಿ ಇದೆ ಎನ್ನಲಾಗಿದೆ.