ದೆಹಲಿ: ಚುನಾವಣೆ ಆಯೋಗವು ದೇಶದಲ್ಲಿ ಲೋಕಸಭಾ ದಿನಾಂಕ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ಹಣ ಹಂಚುವುದು, ಆಸೆ, ಆಮಿಷಗಳಿಗೆ ಕಡಿವಾಣ ಹಾಕಲಾಗುವುದು ಎಂದು ಕೂಡ ಖಡಕ್ ಆಗಿ ಎಚ್ಚರಿಕೆ ನೀಡಿದೆ.
ಈ ಮಧ್ಯೆ 2022- 23ರ ಅವಧಿಯಲ್ಲಿ ನಡೆದ 11 ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲಿ ಹಿಂದೆಂದಿಗಿಂತಲೂ ಅಪಾರ ಪ್ರಮಾಣದಲ್ಲಿ ಹಣದ ಹೊಳೆ ಹರಿದಿರುವುದನ್ನು ಕೂಡ ಆಯೋಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. ಈ ವೇಳೆ ತನ್ನ ವಶಕ್ಕೆ ಸಿಕ್ಕ ನಗದಿನ ಕುರಿತು ಬಹಿರಂಗ ಹೇಳಿಕೆ ನೀಡಿದೆ.
ವಿಧಾನಸಭೆ ಚುನಾವಣೆ ವೇಳೆ ಆಯೋಗವು ಬರೋಬ್ಬರಿ 3400 ಕೋಟಿ ರೂ ಹಣವನ್ನು ಜಪ್ತಿ ಮಾಡಿದೆ. ವಿವಿಧ ತಪಾಸಣೆ, ದಾಳಿಗಳಲ್ಲಿ ದಾಖಲೆಗಳಿಲ್ಲದ ಅಕ್ರಮ ಹಣ ಪತ್ತೆಯಾಗಿವೆ. 2017-18ನೇ ಸಾಲಿನ ಚುನಾವಣೆಗಳಿಗೆ ಹೋಲಿಸಿದರೆ ಭರ್ಜರಿ ಶೇ 835ರಷ್ಟು ಏರಿಕೆಯಾಗಿದೆ ಎಂದು ಆಯೋಗ ಹೇಳಿದೆ.
ಹೆಚ್ಚು ಅಕ್ರಮ ಹಣ ವಶಕ್ಕೆ ಪಡೆದಿರುವುದು ಗುಜರಾತ್ನಲ್ಲಿ. ಆದರೆ ಶೇಕಡಾವಾರು ಪ್ರಮಾಣದ ಲೆಕ್ಕ ಹಾಕಿದಾಗ ಮೇಘಾಲಯ (ಶೇ 6295) ಮುಂಚೂಣಿಯಲ್ಲಿದೆ. ನಾಗಾಲ್ಯಾಂಡ್, ಮಿಜೋರಾಂ ರಾಜ್ಯಗಳಲ್ಲಿಯೂ ಭಾರಿ ಮಟ್ಟದಲ್ಲಿ ಅಕ್ರಮ ಹಣ ಪತ್ತೆಯಾಗಿದೆ ಎಂದು ಆಯೋಗ ಹೇಳಿದೆ.