ನವದೆಹಲಿ: ಕಾಂಗ್ರೆಸ್ ಬೆಂಕಿಯೊಂದಿಗೆ ಆಟವಾಡುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ದೇಶದಲ್ಲಿ ಕೋಮುಗಲಭೆ ಸೃಷ್ಟಿಸುವ ಕಾರ್ಯ ಮಾಡುತ್ತಿದೆ. ಚುನಾವಣಾ (loksabha Elections 2024) ಲಾಭಕ್ಕಾಗಿ ಹಿಂದೂ ಮತ್ತು ಮುಸ್ಲಿಂ ಮಧ್ಯೆ ಒಡಕು ತರುವ ಕಾರ್ಯ ಮಾಡುತ್ತಿದ್ದು, ಬೆಂಕಿಯೊಂದಿಗೆ ಆಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸಾಮಾಜಿಕ ಸಾಮರಸ್ಯ ಕದಡಿ, ಧಾರ್ಮಿಕ ಉದ್ವಿಗ್ನತೆ ಉಂಟು ಮಾಡುತ್ತಿದೆ. ಅದು ಮುಸ್ಲಿಂ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಳ್ಳಲು ಯತ್ನಿಸುತ್ತಿದೆ. ಕಾಂಗ್ರೆಸ್ ನಿಂದ ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಚುನಾವಣೆಗಾಗಿ ಹಿಂದೂ-ಮುಸ್ಲಿಂ ಕಾರ್ಡ್ ಬಳಸಲು ಬಯಸುತ್ತಾರೆ. ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ವಿಭಜಿಸಿ ಸರ್ಕಾರ ರಚಿಸಲು ಬಯಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನ ಪಿತ್ರಾರ್ಜಿತ ಆಸ್ತಿ ತೆರಿಗೆ ಯೋಜನೆ ದೇಶದಲ್ಲಿ ಆರ್ಥಿಕ ಹಿಂಜರಿತ ಸೃಷ್ಟಿಸುತ್ತದೆ. ಅರ್ಜಂಟೈನಾ ಮತ್ತು ವೆನೆಜುವೆಲಾ ಇದನ್ನೇ ಜಾರಿಗೊಳಿಸಿ ಸಾಕಷ್ಟು ಹಾನಿ ಅನುಭವಿಸಿವೆ. ಕಾಂಗ್ರೆಸ್ ಕೂಡ ಇದೇ ಹಾದಿ ಹಿಡಿಯುತ್ತಿದೆ ಎಂದು ಹೇಳಿದ್ದಾರೆ.