ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಿಂಸಾಚಾರದ ಹಿಂದೆ ರಾಜಕೀಯ ಕಾರಣವಿದೆ. ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವುದು ದೊಡ್ಡ ವಿಚಾರವೇನು ಅಲ್ಲ. ಹೀಗೆಂದು ಗಲಭೆಗೆ ಕಾರಣವಾದ ಫೇಸ್ ಬುಕ್ ಪೋಸ್ಟ್ ಹಾಕಿದ್ದ ಆರೋಪಿ ನವೀನ್ ಕುಮಾರ್ ಅವರ ತಂದೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ನವೀನ್ ಕುಮಾರ್ ಈಗಾಗಲೇ ಪೊಲೀಸರ ಎದುರು ತಾನೇ ವಿವಾದಾತ್ಮಕ ಪೋಸ್ಟ್ ಹರಿಬಿಟ್ಟಿದ್ದು ಎಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ನವೀನ್ ತಂದೆ ಪವನ್ ಕುಮಾರ್ ಅವರು ನವೀನ್ ತಪ್ಪು ಮಾಡಿದ್ದರೇ, ಕಾನೂನು ಮೂಲಕ ಶಿಕ್ಷೆ ಆಗಲಿ. ಕಾನೂನಿಗಿಂತ ಮಿಗಿಲು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದು, ದೊಡ್ಡ ವಿಚಾರವೇನು ಅಲ್ಲ. ಈ ವಿಷಯಕ್ಕೆ ಇಷ್ಟು ದೊಡ್ಡ ಮಟ್ಟದ ಗಲಭೆ ಸೃಷ್ಟಿಸುವ ಅಗತ್ಯ ಇರಲಿಲ್ಲ. ಇದು ರಾಜಕೀಯ ದುರುದ್ದೇಶದಿಂದ ಬೇಕಂತಲೇ ಮಾಡಿಸಲಾಗಿರುವ ಗಲಾಟೆ ಎಂದು ಆರೋಪಿಸಿದ್ದಾರೆ ಪವನ್ ಕುಮಾರ್. ಅಷ್ಟೇ ಗಲಭೆಗೆ ಮತ್ತೊಂದು ಕಾರಣ ನೀಡಿರುವ ಅವರು ಆ.5ರಂದು ಅಂದರೆ ರಾಮಮಂದಿರ ಶಿಲಾನ್ಯಾಸದ ದಿನ ನವೀನ್ ಪಟಾಕಿ ಸಿಡಿಸಿ ಸಂಭ್ರಮಿಸಿದ್ದೇ ಈ ಗಲಭೆಗೆ ಕಾರಣವಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.