ಬೆಂಗಳೂರು: ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಕೇಂದ್ರ ಸರ್ಕಾರ ಸೋಂಕು ಹರಡುವಿಕೆಯನ್ನು ತಡೆಯಲು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಇತ್ತ ರಾಜ್ಯದಲ್ಲೂ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ರಾಜ್ಯದ ಮಾಲ್ ಥೀಯೇಟರ್ ಬಂದ್ ಮಾಡುವ ಆದೇಶವನ್ನ ಮಾರ್ಚ್31ರವರೆಗೆ ಮುಂದುವರೆಸಲಾಗಿದೆ. ಸದ್ಯ ಸರ್ಕಾರ ಕೊರೊನಾ ಸಹಾಯವಾಣಿ ಸಂಖ್ಯೆ ಹಾಗೂ ಆಸ್ಪತ್ರೆಗಳ ಸಂಪರ್ಕಕ್ಕೆ ದೂರವಾಣಿ ಸಂಖ್ಯೆಯ ಲಿಸ್ಟ್ ಬಿಡುಗಡೆ ಮಾಡಿದೆ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಕೊರೊನಾ ಸಂಬಂಧ ತುರ್ತು ಸಂದರ್ಭ ಇದ್ರೆ 104ಕ್ಕೆ ಕರೆ ಮಾಡಬಹುದು.
ಇನ್ನು ಈವರೆಗೆ ಕರ್ನಾಟಕದಲ್ಲಿ ಸೋಂಕು ಖಚಿತವಾಗಿರುವ ಒಟ್ಟು 14 ‘ಕೋವಿಡ್ -19 ‘ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ.