ಕೋಟಿಗೊಬ್ಬನ ನೆನಪಲ್ಲಿ ಆದರ್ಶ ದಿನಾಚರಣೆ
ಹಾವಿನ ದ್ವೇಷ ಹನ್ನೆರುಡು ವರ್ಷ ಎಂಬ ನಾಗರಹಾವು ಚಿತ್ರದ ಹಾಡು ಕೇಳಿದ್ರನೇ ಆರು ವರ್ಷದ ಮಕ್ಕಳಿಂದ ಆರವತ್ತಾರರ ವೃದ್ಧರು ಸಹಾ ಎದೆಯುಬ್ಬಿಸಿ ನಿಲ್ಲುತ್ತಾರೆ. ಇಂತಹ ಸಾರ್ವಕಾಲಿಕ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟವರು ಮರೆಯದ ಮಾಣಿಕ್ಯ, ಸಹಾಸ ಸಿಂಹ ಡಾ. ವಿಷ್ಣುವರ್ಧನ್. ಅಭಿನಯ ಭಾರ್ಗವ, ಮೈಸೂರು ರತ್ನ ಎಂಬ ಬಿರುದಾಂಕಿತ ವಿಷ್ಣುವರ್ಧನ್ ಅವರಿಗೆ ಇಂದು 70ನೇ ಜನ್ಮದಿನದ ಸಂಭ್ರಮ.. ಭೌತಿಕವಾಗಿ ವಿಷ್ಣು ಇಲ್ಲದಿದ್ದರು ಇಂದು ಅವರ ಹೆಸರಿನಲ್ಲಿ ಆದರ್ಶ ದಿನಾಚರಣೆ, ಸಸಿ ನೆಡುವುದು, ರಕ್ತದಾನ, ಅನ್ನದಾನ, ಆರೋಗ್ಯ ಶಿಬಿರಗಳ ಮೂಲಕ ಇಂದು ವಿಷ್ಣು ಉತ್ಸವ ನಡೆಯುತ್ತಿದೆ.
ಪಂಚಭಾಷೆಗಳಲ್ಲಿ ಒಟ್ಟು 220 ಚಿತ್ರಗಳಲ್ಲಿ ನಟಿಸಿದ ವಿಷ್ಣದಾದಾ ಜನಿಸಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 1950ನೇ ಇಸವಿಯ ಸೆಪ್ಟೆಂಬರ್ 18ರಂದು. ಚಿತ್ರ ಸಂಭಾಷಣೆಕಾರ ಹೆಚ್ ಎಲ್ ನಾರಾಯಣರಾವ್ ಹಾಗೂ ಕಾಮಾಕ್ಷಮ್ಮನವರ ಮುದ್ದಿನ ಮಗ ಸಂಪತ್ ಕುಮಾರ್ ತಮ್ಮ ಪ್ರಾರ್ಥಮಿಕ ಶಿಕ್ಷಣವನ್ನು ಮುಗಿಸಿ, ಕಾಲೇಜು ಶಿಕ್ಷಣಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಸೇರಿದರು.
ತಮ್ಮ ಐದನೇ ವಯಸ್ಸಿನಲ್ಲೇ ಶಿವರಣೆ ನಂಬೆಯಕ್ಕ ಮೂಲಕ ಬಣ್ಣ ಹಚ್ಚಿದ ಸಂಪತ್ ಕುಮಾರ್, ಬಳಿಕ ಗಿರಿಶ್ ಕಾರ್ನಾಡರ ವಂಶವೃಶದ ಮೂಲಕ ಗಮನ ಸೆಳೆದರು. ನ್ಯಾಯ ನಿಷ್ಠುರನಾದ ರಾಮಾಚಾರಿ ಪಾತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅವರು ಸಂಪತ್ ಕುಮಾರನನ್ನು ವಿಷ್ಣುವರ್ಧನ್ ಎಂಬ ಹೆಸರಿನೊಂದಿಗೆ ನಾಗರಹಾವು ಮೂಲಕ ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದ್ದಾರೆ
ವಿಷ್ಣುದಾದಾ ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿ ಕನ್ನಡಿಗರನ್ನು ರಂಜಿಸಿದ್ದಾರೆ.
ಸುಮಾರು 14 ಚಿತ್ರಗಳಲ್ಲಿ ದ್ವಿಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ದಾಖಲೆ ನಿರ್ಮಿಸಿದ್ದಾರೆ. ಅದರಲ್ಲೂ ಗೌಡರ ಗತ್ತಿನ ಸೂರ್ಯವಂಶ, ಸಿಂಹಾದ್ರಿಯ ಸಿಂಹ, ಜಮಿನ್ದಾರ್, ಹಾಗೂ ಆದರ್ಶನ ಅಣ್ಣನ ಪಾತ್ರದ ಯಜಮಾನನ್ನು ಕನ್ನಡಿಗರು ಎಂದೂ ಮರೆಯಲು ಸಾಧ್ಯವಿಲ್ಲ.
ಕನ್ನಡ ಚಿತ್ರರಂಗದ ದಿಗ್ಗಜನಟ ಡಾ. ವಿಷ್ಣುವರ್ಧನ್ ಅವರು ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿ ಕಲೆಗೆ ಭಾಷೆಯ ಗಡಿಯಿಲ್ಲ ಎನ್ನುವುದನ್ನು ಅಂದೇ ತೋರಿಸಿಕೊಟ್ಟರು. ಅಕ್ಷಯ್ ಕುಮಾರ್, ರಜಿನಿಕಾಂತ್, ಕಮಲ್ ಹಾಸನ್, ಮುಮ್ಮಟ್ಟಿ, ವಿಜಯ್ ಕಾಂತ್, ಶಿವಾಜಿ ಗಣೇಶನ್, ಕೃಷ್ಣಂ ರಾಜು, ರಾಜಶೇಖರ್ ಜೊತೆ ತೆರೆಹಂಚಿಕೊಂಡು ಪರಭಾಷೆಗಳಲ್ಲೂ ತಮ್ಮ ಸ್ನೇಹಲೋಕ ಸೃಷ್ಠಿಸಿಕೊಂಡಿದ್ದರು. ಅಲ್ದೆ ನಟ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ನಲ್ಲಿ ವಿಷ್ಣುದಾದಾ ಬಣ್ಣ ಹಚ್ಚಿ ಕಮಾಲ್ ಮಾಡಿದ್ದರು. ತಮ್ಮ ವಿವಿಧ ಚಿತ್ರದ ಅಭಿನಯಕ್ಕೆ ಒಟ್ಟು 7 ಫಿಲ್ಮ ಫೇರ್ ಪ್ರಶಸ್ತಿ ಪಡೆದಿದ್ದಾರೆ.
ತನ್ನದಲ್ಲದ ತಪ್ಪಿಗೆ ಕೆಲ ಕುತಂತ್ರಿಗಳು ಮಾಡಿದ ಸಂಚಿಗೆ ಬಲಿಯಾದ ವಿಷ್ಣುದಾದ ಗಂಧದಗುಡಿ ಪ್ರಕರಣದಲ್ಲಿ ಸಂಕಷ್ಟಗಳ ಸರಪಳಿಯನ್ನೇ ಎದುರಿಸಿದರು. ಈ ವೇಳೆ ವಿಷ್ಣುವರ್ಧನ್ ಜೊತೆ ನಿಂತದ್ದು ಅವರ ಕುಚುಕು ಗೆಳೆಯ ಅಂಬರೀಶ್ ಮತ್ತು ಅಭಿಮಾನಿಗಳು. ನಂತರ ಬಂಧನ ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದ ಕರ್ನಾಟಕ ತೊರೆಯುವ ಯೋಚನೆ ಕೈಬಿಟ್ಟ, ಕನ್ನಡ ಮಣ್ಣನ್ನೇ ಹಣೆಯ ತಿಲಕ್ಕವನ್ನಾಗಿಸಿಕೊಂಡರು.
ಭೂತಯ್ಯನ ಮಗ ಅಯ್ಯು, ಕಾರ್ಮಿಕ ಕಳ್ಳನಲ್ಲ, ಊರಿಗೆ ಉಪಕಾರಿ, ಕರ್ಣ, ಕಥಾನಾಯಕ, ಕರುಣಾಮಯಿ, ದೇವಾ, ಧಣಿ, ಸೂರಪ್ಪ, ಕದಂಬ, ಕೋಟಿಗೊಬ್ಬ ಹೃದಯವಂತ ಚಿತ್ರಗಳ ಮೂಲಕ ವಿಷ್ಣು ಅದೇಷ್ಟು ಹತಾಶ ಮನಸುಗಳಿಗೆ ಆದರ್ಶ ಹಾಗೂ ಜೀವನೋತ್ಸಹ ತುಂಬಿದ್ದಾರೆ.
ಇನ್ನು ವಿಷ್ಣುವರ್ಧನ್ ಅವರ ಸಂಸಾರಿಕ ಜೀವನದ ಬಗ್ಗೆ ಹೇಳೋದಾದರೆ ಹೆಸರಾಂತ ಪಂಚಭಾಷನಟಿ ಭಾರತಿಯವರನ್ನು ಮದುವೆಯಾಗಿ, ಕೀರ್ತಿ, ಚಂದನ ಎಂಬ ದತ್ತು ಪತ್ರಿಯರ ಜೊತೆ ಆದರ್ಶ ಪ್ರಾಯ ಜೀವನ ನಡೆಸಿದ್ದಾರೆ.
ಇನ್ನು ಆರಂಭದ ನಾಗರಹಾವಿನಿಂದ ಅಂತ್ಯದ ಆಪ್ತರಕ್ಷದವರೆಗೂ ಯಶಸ್ಸು ವಿಷ್ಣು ಜೀವನದ ಜೊತೆ ಅಗತ್ಯ ಬಿದ್ದಾಗಲೆಲ್ಲ ಗಟ್ಟಿಯಾಗಿ ನಿಂತಿತ್ತು. ಆದರೆ ಅವರು 2009ರಂದು ಗತಿಸಿದ ಮೇಲೆ ಅವರ ಸ್ಮಾರಕದ ವಿಚಾರದಲ್ಲಿ ಚಿತ್ರರಂಗ ಮತ್ತು ಸರ್ಕಾರ ತಮ್ಮ ಸಹಜ ಗೌರವ ಸಲ್ಲಿಸಲು ಸಾಧ್ಯವಾಗಿಲ್ಲ. ಆದರೆ ಇಂದಿಗೂ ಅವರ ಅಭಿಮಾನಿಗಳು ಮಾತ್ರ ರಾಷ್ಟ್ರೀಯ ಉತ್ಸವದಂತ ಅದ್ದೂರಿ ಕಾರ್ಯಕ್ರಮಗಳು ಮಾತ್ರವಲ್ಲದೇ ಅನೇಕ ಅರ್ಥಪೂರ್ಣ ಕೆಲಸ ಮಾಡುತ್ತಿದ್ದಾರೆ.
ವೀರಪ್ಪನಾಯ್ಕ, ಮುತ್ತಿನಹಾರ, ವಿಷ್ಣುಸೇನಾದಂತಹ ದೇಶಾಭಿಮಾನ ಸಾರುವ ಚಿತ್ರದ ಮೂಲಕ ಸಂಪತ್ ಕುಮಾರ್ ಕನ್ನಡಿಗರ ಹೃದಯಮಂದಿರದಲ್ಲಿ ಸಾಹಸ ಸಿಂಹನಾಗಿ ಸಾದ ಜೀವಂತವಾಗಿದ್ದಾರೆ.
ಮಾನವೀಯ ಮೌಲ್ಯಗಳನ್ನೇ ಜೀವನದ ಉಸಿರಾಗಿಸಿಕೊಂಡು ಬದುಕಿದ “ಹೃದಯವಂತ”ನಿಗೆ ನಮ್ಮ ಕಡೆಯಿಂದ ಹುಟ್ಟುಹಬ್ಬದ ಶುಭಾಶಯಗಳು.. ನೀವು ಸಹಾ ಸಹಾಸಸಿಂಹನ ಜನ್ಮದಿನ ಸಂಭ್ರಮದಲ್ಲಿ ಭಾಗಿಯಾಗಬೇಕೆಂದರೆ ಕಮೆಂಟ್ ಮಾಡಿ ಕೋಟಿಗೊಬ್ಬನಿಗೆ ಶುಭಕೋರಿ.
✍ ಪ್ರತಾಪ್ ಕೋಟೆ