ಗುರುಗಾಂವ್: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ಮನೆಯಲ್ಲಿ ಕಳ್ಳತನ ನಡೆದಿರುವ ವಿಷಯ ಹೊರ ಬಿದ್ದಿದೆ.
ಈ ಕುರಿತು ಯುವರಾಜ್ ಸಿಂಗ್ ಅವರ ತಾಯಿ ಆರೋಪ ಮಾಡಿದ್ದು, ಮನೆಯಲ್ಲಿ 70 ಸಾವಿರ ನಗದು ಹಾಗೂ ಚಿನ್ನಾಭರಣ ಕಾಣೆಯಾಗಿದೆ ಎಂದಿದ್ದಾರೆ. ಪಂಚಕುಲದ ಮಾನಸಾ ದೇವಿ ಕಾಂಪ್ಲೆಕ್ಸ್ನಲ್ಲಿರುವ ಅವರ ಮನೆಯಲ್ಲಿದ್ದ ನಗದು ಹಾಗೂ ಆಭರಣಗಳನ್ನು ಕೆಲಸ ಮಾಡುವ ಸಿಬ್ಬಂದಿಯೇ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಅಲ್ಲದೇ, ಮನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯೇ ಕಳ್ಳತನ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಸಿಬ್ಬಂದಿ ಸಾಕೇತ್ರಿಯ ಲಲಿತಾ ದೇವಿ, ಮನೆಕೆಲಸಕ್ಕಾಗಿ ಹಾಗೂ ಅಡುಗೆ ಕೆಲಸಕ್ಕಾಗಿ ನೇಮಕಗೊಂಡ ಬಿಹಾರ ಮೂಲದ ವ್ಯಕ್ತಿ ಸಲೀಂದರ್ ದಾಸ್ ಕಳ್ಳತನ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಇಬ್ಬರು ಆರೋಪಿಗಳು ಕೆಲಸ ಬಿಟ್ಟ ಆರು ತಿಂಗಳ ನಂತರ ಮನೆಯಲ್ಲಿದ್ದ ಎಲ್ಲ ಚಿನ್ನ ಹಾಗೂ ನಗದು ಕಳ್ಳತನವಾಗಿದೆ ಎನ್ನಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.