ಬದ್ಧ ವೈರಿಗಳ ವಿರುದ್ಧ ತೊಡೆತ್ತಟ್ಟಿದ ಶಿವರಾಮೇಗೌಡ
ಮಂಡ್ಯ: ಚಲುವರಾಯಸ್ವಾಮಿ, ಸುರೇಶ್ ಗೌಡ ನನಗೆ ರಾಜಕೀಯ ಬದ್ಧ ವೈರಿಗಳಾಗಿದ್ದು, ಚುನಾವಣೆಯಲ್ಲಿ ಏಕಕಾಲದಲ್ಲಿ ಬದ್ಧ ವೈರಿಗಳನ್ನ ಸೋಲಿಸುವ ಅವಕಾಶ ನನಗೀಗ ಬಂದಿದೆ ಎಂದು ಬದ್ಧ ವೈರಿಗಳ ವಿರುದ್ಧ ಮಾಜಿ ಸಂಸದ ಶಿವರಾಮೇಗೌಡ ನಾಗಮಂಗಲದಲ್ಲಿ ತೊಡೆತ್ತಟ್ಟಿದ್ದಾರೆ.
JDSನಿಂದ ಉಚ್ಚಾಟನೆಗೊಂಡ ಬಳಿಕ ರೆಬೆಲ್ ಆಗಿರುವ ಶಿವರಾಮೇಗೌಡ ಮಾತನಾಡಿ ನಾನು ಈಗ ಫ್ರೀ ಬರ್ಡ್, ನನಗೆ ಪಕ್ಷ ಸೂಟ್ ಆಗಲ್ಲ ಅಂತ ಜನರೇ ಹೇಳುತ್ತಿದ್ದಾರೆ. ನಾನು ಪಕ್ಷೇತರ ಸರ್ಧೆಗೆ ಸಿದ್ಧನಾಗಿದ್ದೇನೆ. ಪ್ರತಿ ಹಳ್ಳಿಯಲ್ಲೂ ಕಾಂಗ್ರೆಸ್-ಜೆಡಿಎಸ್ ಎರಡು ಪಕ್ಷದ ಕಾರ್ಯಕರ್ತರೂ ಬೆಂಬಲ ಕೊಡುತ್ತಿದ್ದಾರೆ. ನನ್ನ ಸ್ಪರ್ಧೆ ಕೆಲವರಿಗೆ ಲಾಭ ಆಗಬಹುದು ಎಂದು ತಿಳಿದಿದ್ದಾರೆ.
ಅಲ್ಲದೇ ಪ್ರತಿ ಊರಲ್ಲೂ ಮೂರು ಗುಂಪಾಗಿ ರಚಿಸುತ್ತೇನೆ. ಅವರಿಬ್ಬರಂತೆ ನನ್ನ ಗುಂಪು ಇರುವಂತೆ ಮಾಡುತ್ತೇನೆ. ಅವರ ಗುಂಪು ಇಲ್ಲದಿದ್ದರು ನನ್ನ ಪರವಾದ ಗುಂಪು ಇರಲೆಬೇಕು. ನಾನು ಚೆಲುವರಾಯಸ್ವಾಮಿ, ಸುರೇಶ್ ಗೌಡ ಇಬ್ಬರ ಮತವನ್ನು ಪಡೆಯುತ್ತೇನೆ. ಹೀಗಾಗಿ ನಾನು ಈ ಕ್ಷೇತ್ರ ಬಿಟ್ಟು ಹೋಗಲ್ಲ ಹೀಗಾಗಿ ನಾನು ಮನೆ ಮಾಡುತ್ತಿರೋದು ಎಂದರು.
ಪಕ್ಷೇತರ ಅಭ್ಯರ್ಥಿಯಾಗಿ ನಾಗಮಂಗಲದಿಂದ ಸ್ಪರ್ಧಿಸುತ್ತಿರುವ ಶಿವರಾಮೇಗೌಡ ಅವರು ನಾಗಮಂಗಲದಲ್ಲಿ ಟಿಕಾಣಿ ಹೂಡಿದ್ದು, ಕ್ಷೇತದಲ್ಲೇ ಗೃಹ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಸ್ಪರ್ಧೆಗೆ ಸಿದ್ಧನಾಗಿದ್ದೇನೆ ಎಂಬ ಸಂದೇಶ ರವಾನಿಸಿದ್ದಾರೆ.
ಮುಂದುವರೆದು ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಅಸಮಾಧಾನ ಇಲ್ಲ. ನಮ್ಮವರೇ ಕೆಲವರು ನನ್ನ ವಿರುದ್ಧ ಹುನ್ನಾರ ನಡೆಸಿದ್ದರು. ಅವರ ಹುನ್ನಾರಕ್ಕೆ ನಾನು ಖೆಡ್ಡಕ್ಕೆ ಬಿದ್ದಿದ್ದೀನಿ. ಕುಮಾರಸ್ವಾಮಿ ಅವರು ಈ ಕುರಿತು ಯೋಚಿಸಬಹುದಿತ್ತು. ಆದರೆ ಅವರು ತಕ್ಷಣ ಉಚ್ಚಾಟನೆ ತೀರ್ಮಾನ ಮಾಡಿಬಿಟ್ಟರು.ಅವರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಚುನಾವಣೆ ಮುಗಿಯುವವರೆಗೂ ನಿದ್ದೆ ಮಾಡುವುದಿಲ್ಲ, ಹೋರಾಟ ನಿರಂತರ ಎಂದು ಸಮರಸಾರಿದ್ದಾರೆ.
ಇನ್ನೂ ನಾಗಮಂಗಲದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ಸಾರಾಸಗಟಾಗಿ 7% ಕಮಿಷನ್ ಪ್ರತಿ ಕೆಲಸದಲ್ಲೂ ಇದೆ. ಶಾಸಕರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.