ಬೆಂಗಳೂರು : ದ್ವೇಷವಿದ್ದವನ ಮನೆ ಬಿಟ್ಟು ಬೇರೆ ಮನೆಗೆ ನುಗ್ಗಿದ್ದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ನಗರದ ಸುಬ್ರಹ್ಮಣ್ಯ ನಗರದ ಗಾಯತ್ರಿ ನಗರದಲ್ಲಿ ತಡರಾತ್ರಿ ನಡೆದಿದೆ. ಅಭಿಗೌಡ ಮತ್ತು ಆತನ ಸಹಚರರಿಂದ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಗಾಯತ್ರಿ ನಗರದಲ್ಲಿ ಗಣೇಶ ಕೂಡಿಸುವ ವಿಚಾರಕ್ಕೆ ಅಭಿಗೌಡ ಮತ್ತು ರಾಕೇಶ್ ಎಂಬುವವರ ಮಧ್ಯೆ ಹಲವು ದಿನಗಳಿಂದ ಜಗಳ ಇತ್ತು. ಹೀಗಾಗಿ ಇಬ್ಬರು ಆಗಾಗ ಜಗಳ ಮಾಡುತ್ತಿದ್ದರು.
ಈ ನಿಟ್ಟಿನಲ್ಲಿ ರಾಕೇಶ್ ಮನೆಗೆ ನುಗ್ಗಿ ಹೊಡೆಯಬೇಕೆಂದು ಅಭಿ ಪ್ಲಾನ್ ಮಾಡಿದ್ದ. ಆದರೆ, ರಾಕೇಶ್ ಮನೆಯ ಬದಲು ಆತನ ಪಕ್ಕದ ಮನೆಗೆ ನುಗ್ಗಿ ಮಹಿಳೆ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.