ಬೆಂಗಳೂರು : ವರದಕ್ಷಿಣೆಯ ಕಿರುಕುಳಕ್ಕೆ ಬೇಸತ್ತು ಬಿ.ಇ ಪದವೀಧರೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಕಬ್ಬನ್ ಪೇಟೆಯಲ್ಲಿ (Kabban Pete) ನಡೆದಿದೆ.
ಐಶ್ವರ್ಯ (24) ಆತ್ಮಹತ್ಯೆಗೆ ಶರಣಾದ ವಿವಾಹಿತ ಮಹಿಳೆ ಎನ್ನಲಾಗಿದ್ದು, ಕಬ್ಬನ್ ಪೇಟೆಯ 2ನೇ ಮುಖ್ಯರಸ್ತೆಯಲ್ಲಿನ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ್ದಾರೆ. ಇವರು ಬಿಇ ಮುಗಿಸಿ ಕಳೆದ ಮೂರು ವರ್ಷಗಳ ಹಿಂದೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಎಂಬಾತನೊಂದಿಗೆ ಮದುವೆ ಮಾಡಿಕೊಂಡಿದ್ದರು.
ಐಶ್ವರ್ಯ ಕುಟುಂಬಸ್ಥರು ಮದುವೆ ಸಂದರ್ಭದಲ್ಲಿ 240 ಗ್ರಾಂ ಚಿನ್ನಾಭರಣ, 2 ಲಕ್ಷ ರೂ. ಹಣ ನೀಡಿದ್ದರು. ನಂತರ ಮತ್ತೆ ವರದಕ್ಷಿಣೆಗಾಗಿ ಪೀಡಿಸಿದ್ದಕ್ಕೆ 5 ಲಕ್ಷ ರೂ. ಹಣ ನೀಡಿದ್ದಾರೆ. ಅಲ್ಲದೇ, ಈ ದಂಪತಿಗೆ ಒಂದೂವರೆ ವರ್ಷದ ಮುದ್ದಾದ ಮಗು ಇದೆ. ಆದರೆ, ಪತಿಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತ ಐಶ್ವರ್ಯ, ಕುಟುಂಬಸ್ಥರಿಗೆ ಡೆತ್ ನೋಟ್ (Death Note) ಬರೆದು ವಾಟ್ಸಪ್ ಮೂಲಕ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಡೆತ್ ನೋಟ್ ನಲ್ಲಿ ಪತಿ ಮತ್ತು ಕುಟುಂಬಸ್ಥರು ನೀಡುತ್ತಿದ್ದ ಕಿರುಕುಳದ ಕುರಿತು ಉಲ್ಲೇಖವಿದೆ ಎನ್ನಲಾಗಿದ್ದು, ಪತಿ ಮಂಜುನಾಥ್, ಮಾವ ರಾಜೇಂದ್ರನ್, ಅತ್ತೆ ರತ್ನ ಹಾಗೂ ನಾದಿನಿ ಸುಧಾ ವಿರುದ್ದ ದೂರು ದಾಖಲಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.