ಕಲಬುರಗಿ: ಕಲಬುರಗಿ ಜಿಲ್ಲೆ ವರುಣನ ಅಬ್ಬರಕ್ಕೆ ತತ್ತರಿಸಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕಾರೊಂದು ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕಲಬುರಗಿ ಜಿಲ್ಲೆಯ ಅಳಂದ ಬೊಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ.
ಕಾರಿನಲ್ಲಿದ್ದ ಇಬ್ಬರ ಪೈಕಿ ಓರ್ವನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಯಳಸಂಗಿ ಗ್ರಾಮದ ನಿವಾಸಿಗಳಾದ ರಾಜು ಕುಂಬಾರ್ ತನ್ನ ಕಾರಿನಲ್ಲಿ ಸಿದ್ದು ಎಂಬುವರ ಜತೆ ಬರುತ್ತಿದ್ದರು. ರಾತ್ರಿಯ ಕತ್ತಲಿನ ನಡುವೆಯೂ ಹರಿಯುತ್ತಿದ್ದ ಹಳ್ಳದಲ್ಲಿ ಕಾರನ್ನು ಚಾಲನೆ ಮಾಡಲು ಹೋಗಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ರಾಜು ಕುಂಬಾರ್ನನ್ನು ರಕ್ಷಣೆ ಮಾಡಿದ್ದು, ಸಿದ್ದು ಎಂಬ ವ್ಯಕ್ತಿಗಾಗಿ ಹುಡುಕಾಟ ನಡೆದಿದೆ.
ಸ್ಥಳದಲ್ಲಿ ಬೀಡು ಬಿಟ್ಟಿರುವ ನಿಂಬರ್ಗಾ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.