ವಿಜಯಪುರ : ಸಂಡೆ, ಅಮವಾಸ್ಯೆ, ಗ್ರಹಣ ಇತ್ಯಾದಿ ದಿನಗಳಲ್ಲಿ ಯಾರೂ ಹೊರಬರುವುದಿಲ್ಲ. ಸಭೆ ಸಮಾರಂಭಗಳನ್ನು ಮಾಡುವದಿಲ್ಲ. ಇದು ರೂಡಿಗತ ಸಂಪ್ರದಾಯ. ಆದರೆ ಇಂದು ರವಿವಾರ, ಅಮವಾಸ್ಯೆ, ಗ್ರಹಣ ಎಲ್ಲವೂ ಕೂಡಿಬಂದಾಗಲಂತೂ ಅಶುಭ ಎಂದು ಯಾವುದೇ ಚಟುವಟಿಕೆ ನಡೆಸುವದಿಲ್ಲ. ಆದರೆ ಮಾಜಿ ಸಚಿವ ಎಂ.ಬಿ.ಪಾಟೀಲ್ರವರು ಇದೇಲ್ಲ ರೂಡಿಗತ ಸಂಪ್ರದಾಯವನ್ನು ಬದಿಗೊತ್ತಿ ಇಡೀ ದಿನ ವಿವಿಧ ಇಲಾಖೆಗಳ ಹಾಗೂ ತಮ್ಮ ಬಿ.ಎಲ್.ಡಿ.ಇ ಸಂಸ್ಥೆಗೆ ಸಂಬಂಧಿಸಿದ ಸಭೆಗಳನ್ನು ನಡೆಸುವ ಮೂಲಕ ಕ್ರಿಯಾಶೀಲರಾಗಿ ನಡೆದು ಬಂದ ಸಂಪ್ರದಾಯಕ್ಕೆ ಬ್ರೆಕ್ ಹಾಕಿದ್ದಾರೆ.
ಶನಿವಾರ ಬೆಳಿಗ್ಗೆಯೇ ಇಂದಿನ ರವಿವಾರದ ಸಭೆಗಳನ್ನು ನಿಗದಿ ಪಡಿಸಿಕೊಂಡಿದ್ದರು “ಇಲ್ಲಾ, ಸರ್ ನಾಳೆ ಅಮವಾಸ್ಯೆ ಗ್ರಹಣ ಬೇರೆ ಇದೆ. ಸಭೆ ನಡೆಸುವದು ಸೂಕ್ತವಲ್ಲ” ಎಂದು ಸಿಬ್ಬಂದಿ ಹೇಳಿದರೂ “ಕೆಲಸ ಮಾಡಲು ಅಮವಾಸ್ಯೆ, ಗ್ರಹಣ ಎಂದಿಗೂ ಅಡ್ಡಿ ಬರುವದಿಲ್ಲ. ಬಸವ ತತ್ವವನ್ನು ಕೇವಲ ಬಾಯಿಯಿಂದ ಹೇಳಿದರೆ ಸಾಲದು, ಆಚರಣೆಗೂ ತರಬೇಕು”. ಎಂದು ಇಂದು ಇಡೀ ದಿನ ಸಭೆಗಳನ್ನು ನಿಗದಿಪಡಿಸಿಕೊಂಡಿದ್ದರು.
ಅದರ ಅನುಸಾರ ಇಂದು ಬೆಳಿಗ್ಗೆ ಬೃಹತ್ ನೀರಾವರಿ ಇಲಾಖೆಯ ತಮ್ಮ ಬಬಲೇಶ್ವರ ಕ್ಷೇತಕ್ಕೆ ಸಂಬಂಧಿಸಿದ ತುಬಚಿ-ಬಬಲೇಶ್ವರ ಏತನೀರಾವರಿ ಯೋಜನೆ, ಮುಳವಾಡ ಏತನೀರಾವರಿ ಯೋಜನೆಯ ಕುರಿತು ಅಧಿಕಾರಿಗಳೊಂದಿಗೆ ಸಭೆಗಳನ್ನು ನಡೆಸಿದರು.
ಮಳೆಗಾಲದಲ್ಲಿ ಈ ಕಾಲುವೆಗಳಲ್ಲಿ ನೀರು ಹರಿಬಿಡಲಾಗುತ್ತಿದ್ದು, ಜಾಕವೆಲ್ಗಳಲ್ಲಿ ಮೋಟಾರ್ ದುರಸ್ಥಿ, ಶಾಖಾ ಕಾಲುವೆಗಳ ಕಾಮಗಾರಿಯ ಪ್ರಗತಿಯ ವಿವರಗಳು, ಭೂಸ್ವಾಧೀನ ಸಂಬಂಧಿಸಿದ ಅನುದಾನ ಬಿಡುಗಡೆ ಕುರಿತು ಸವಿವರವಾಗಿ ಮೂರು ಗಂಟೆಗಳ ಕಾಲ ಚರ್ಚಿಸಿದರು. ಇಲಾಖೆ ಮಂತ್ರಿಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಈ ಎರಡು ಯೋಜನೆಗಳಿಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಮಾತನಾಡಿದರು.
ಅಲ್ಲದೇ ಸಣ್ಣ ನೀರಾವರಿ ಇಲಾಖೆಯಿಂದ ಅಂತರ್ಜಲ ವೃದ್ಧಿಯಾಗಲು, ವಿವಿಧ ನಾಲಾಗಳಿಗೆ ಅಗತ್ಯವಿರುವೆಡೆ ಚೆಕ್ಡ್ಯಾಂ ಹಾಗೂ ಬಾಂದಾರಗಳನ್ನು ನಿರ್ಮಿಸಲು ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಭೆ ನಡೆಸಿದರು.
ಈ ಸಭೆಯಲ್ಲಿ ಕರ್ನಾಟಕ ನೀರಾವರಿ ನಿಗಮ ಅಧೀಕ್ಷಕ ಅಭಿಯಂತರ ಚಂದ್ರಶೇಖರ, ಕೃಷ್ಣಾ ಭಾಗ್ಯ ಜಲ ನಿಗಮ ಅಧೀಕ್ಷಕ ಅಭಿಯಂತರ ಜಗದೀಶ ರಾಠೋಡ, ಅಥಣಿ ವಲಯ ಕಾರ್ಯನಿರ್ವಾಹಕ ಅಭಿಯಂತರ ಶ್ರೀಕಾಂತ ಜಾಲಿಬೇರಿ, ಸಣ್ಣ ನೀರಾವರಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ ನಾಯಕ ಸೇರಿದಂತೆ ರೈತರ ಪರವಾಗಿ ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ ಉಪಸ್ಥಿತರಿದ್ದರು.
ನಂತರ ಮಧ್ಯಾಹ್ನ ಬಿ.ಎಲ್.ಡಿ.ಇ ಸಂಸ್ಥೆ ಎ.ವಿ.ಎಸ್. ಆಯುರ್ವೇದ ಕಾಲೇಜಿಗೆ ಸಂಬಂಧಿಸಿದ ಸಭೆಯನ್ನು ನಡೆಸಿದರು. ಸರ್ಕಾರದಿಂದ ಸಂಸ್ಥೆಗೆ ನೀಡಿದ 17ಎಕರೆ ಲೀಸ್ ಆಸ್ತಿಯಲ್ಲಿ, ಅನೇಕರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು, ಮನೆಗಳನ್ನು ಕಟ್ಟಿಕೊಂಡಿದ್ದು, ಒತ್ತುವರಿದಾರರನ್ನು ತೆರವುಗೊಳಿಸಲು ಅಗತ್ಯ ಕಾನೂನು ಕ್ರಮ ಜರುಗಿಸುವ ಕುರಿತು ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ರಾಘವೇಂದ್ರ ಕುಲಕರ್ಣಿ, ಕಾನೂನು ಸಲಹೆಗಾರ ಸುರೇಶ ಹಕ್ಕಿ, ಕಂದಾಯ ಸಲಹೆಗಾರ ನಿವೃತ್ತ ತಹಶೀಲ್ದಾರ ಜಿ.ಆರ್.ಶೀಲವಂತ, ಡಾ.ಮಹಾಂತೇಶ ಬಿರಾದಾರ, ಪ್ರಾಚಾರ್ಯ ಸಂಜಯ ಕಡ್ಲಿಮಟ್ಟಿ, ಅಧೀಕ್ಷಕ ಎಸ್.ಎ.ಬಿರಾದಾರ ಉಪಸ್ಥಿತರಿದ್ದರು.
ನಂತರ ಬಿ.ಎಲ್.ಡಿ.ಇ ಸ್ವಾಯತ್ತ ವಿವಿ ಕಛೇರಿಗೆ ತೆರಳಿ ಉಪಕುಲಪತಿ ಹಾಗೂ ವಿವಿ ಪ್ರಮುಖರೊಂದಿಗೆ ಮಹತ್ವದ ಸಭೆ ನಡೆಸಿದರು.