ಬೆಂಗಳೂರು: ಈಜುಕೋಳದಲ್ಲಿ 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಬಂಧಿಸಲಾಗಿದೆ.
ಘಟನೆ ನಡೆದ ಒಂದು ತಿಂಗಳ ನಂತರ ಆರೋಪಿಗಳನ್ನು ಬಂಧಿಸಲಾಗಿದೆ. ದೇಬಾಶೀಸ್ ಸಿನ್ಹಾ, ಜಾವೀದ್, ಸಂತೋಷ್ ಮಾಹಾರಾಣ, ಬಿಕಾಶ್ ಕುಮಾರ್, ಭಕ್ತ ಚರಣ್ ಪ್ರಧಾನ್, ಸುರೇಶ್, ಗೋವಿಂದ್ ಮಂಡಲ್ ಬಂಧಿತ ಆರೋಪಿಗಳು ಎನ್ನಲಾಗಿದೆ.
ಡಿ. 28ರಂದು ಸಿಲಿಕಾನ್ ಸಿಟಿಯ ವೈಟ್ ಫೀಲ್ಡ್ ನಲ್ಲಿನ ವರ್ತೂರಿನ ಪ್ರೆಸ್ಟೀಜ್ ಅಪಾರ್ಟ್ಮೆಂಟ್ನಲ್ಲಿ 10 ವರ್ಷದ ಬಾಲಕಿ ಈಜುಕೊಳದಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಈ ವೇಳೆ ವಿದ್ಯುತ್ ಶಾಕ್ ನಿಂದಾಗಿ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಆದರೆ, ಸಂಶಯ ವ್ಯಕ್ತಪಡಿಸಿ ತಂದೆ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹೀಗಾಗಿ ಪೊಲೀಸರು ತನಿಕೆ ಆರಂಭಿಸಿದ್ದರು. ಎಫ್ ಎಸ್ ಎಲ್ ವರದಿಯಲ್ಲಿ ಬಾಲಕಿಗೆ ಕರೆಂಟ್ ಶಾಕ್ ತಗುಲಿರುವುದು ದೃಢಪಟ್ಟಿತ್ತು. ಸರಿಯಾಗಿ ನಿರ್ವಹಣೆ ಮಾಡದಿರುವುದೇ ಬಾಲಕಿಯ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ 7 ಜನರನ್ನು ಬಂಧಿಸಲಾಗಿದೆ ಎನ್ನಲಾಗಿದೆ.