ನವದೆಹಲಿ: ಬಿಜೆಪಿ ಸರ್ಕಾರ (BJP Government) ಇಲ್ಲದ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಮೋದಿ ಸರ್ಕಾರದಲ್ಲಿ ಸ್ಥಾಪನೆಯಾದ ಸಂಸ್ಥೆಗಳು ಅಥವಾ ಉದ್ಯೋಗ ಸೃಷ್ಟಿಯಾಗಿಲ್ಲ. ನೆಹರು ಸರ್ಕಾರದಲ್ಲಿ ಸ್ಥಾಪನೆಯಾದ ಸಂಸ್ಥೆಗಳಿಂದ ಮಾತ್ರ ಉದ್ಯೋಗ ಸಿಗುತ್ತಿವೆ ಎಂದು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆರೋಪಿಸಿದ್ದಾರೆ.
ಅಲ್ಲದೇ, ಕೇಂದ್ರ ಸರ್ಕಾರ ಶ್ವೇತ ಪತ್ರ (White Paper) ಬಿಡುಗಡೆ ಮಾಡುವ ಮೊದಲೇ ತಮ್ಮ ನಿವಾಸದಲ್ಲಿ ಕಪ್ಪು ಪತ್ರದ (Black Paper) ಪೋಸ್ಟರ್ ಬಿಡುಗಡೆ ಮಾಡಿರುವ ಅವರು, ಬೆಲೆ ಏರಿಕೆ ಅತಿದೊಡ್ಡ ಸಮಸ್ಯೆಯಾಗಿದೆ. ಆದರೆ, ಸರ್ಕಾರ ಮತ್ರ ಕೆಲವು ಜನರನ್ನು ಟಾರ್ಗೆಟ್ ಮಾಡಿ ಬೆಲೆ ಏರಿಸುತ್ತಿದೆ. ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆಂದು ಕೃಷಿ ಕಾಯ್ದೆ ತಂದರು. ಒಂದು ವರ್ಷ ರೈತರ ಪ್ರತಿಭಟನೆಯ ನಂತರ ಮೂರು ಕಾನೂನು ವಾಪಸ್ ಪಡೆದರು.
ಸಾಮಾಜಿಕ ನ್ಯಾಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಲಾಗುತ್ತಿದೆ. ಮೋದಿ ಸರ್ಕಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ. ಚುನಾವಣೆ ಬಾಂಡ್ಗಳ ಮೂಲಕ ಹಣ ವಸೂಲಿ ಮಾಡಲಾಗುತ್ತಿದೆ. ಇಡಿ, ಸಿಬಿಐ ಬಿಟ್ಟು ಹೆದರಿಸಲಾಗುತ್ತಿದೆ, ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನನ್ನ ವಿರುದ್ಧವೂ ದೂರು ದಾಖಲಿಸುವ ಕೆಲಸ ಮಾಡಲಾಗುತ್ತಿದೆ. ನನಗೂ ಅವಹೇಳನ ಮಾಡುವುದು, ಬೆದರಿಸುವ ಪ್ರಯತ್ನ ನಡೆಯುತ್ತಿವೆ. ರಾಹುಲ್ ಗಾಂಧಿ, ಸೋನಿಯಗಾಂಧಿ, ಪ್ರಿಯಾಂಕಾ ಗಾಂಧಿ ಎಲ್ಲರನ್ನೂ ಅವಹೇಳನ ಮಾಡುತ್ತಾರೆ. ಪ್ರಧಾನಮಂತ್ರಿ ಹುದ್ದೆಗೆ ಗೌರವವಿದೆ. ನಮ್ಮ ಸಾಧನೆಗಳನ್ನು ಹೇಳಬೇಕು, ವಿರೋಧ ಪಕ್ಷದ ನಾಯಕರನ್ನು ಅವಹೇಳನ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.