ಮಂಗಳೂರು: ಇಲ್ಲಿಯ ಪಡೀಲ್ ಹೋಂ ಸ್ಟೇ ಮೇಲಿನ ದಾಳಿ ಪ್ರಕರಣದ (Homestay Attack Case) ಎಲ್ಲ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
12 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ಪ್ರಕರಣದ ಎಲ್ಲ 40 ಆರೋಪಿಗಳನ್ನು ದೋಷಮುಕ್ತ ಎಂದು ತೀರ್ಪು ನೀಡಿದೆ. ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದ ಹಿಂದೂಪರ ಸಂಘಟನೆಯ ನೂರಾರು ಕಾರ್ಯಕರ್ತರು ಅನೈತಿಕ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಸಾಕ್ಷಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾ.ಕಾಂತರಾಜು ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ
44 ಜನ ಆರೋಪಿಗಳು ಪ್ರಕರಣದಲ್ಲಿದ್ದರು. ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಓರ್ವ ಪತ್ರಕರ್ತನ ವಿರುದ್ಧದ ಪ್ರಕರಣ ಕೈ ಬಿಡಲಾಗಿತ್ತು. ಇನ್ನುಳಿದಂತೆ 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಕೋರ್ಟ್ ತೀರ್ಪು ನೀಡಿದೆ. 2012ರ ಜುಲೈ 28 ರಂದು ಮಂಗಳೂರಿನ ಹೋಂ ಸ್ಟೇ ಮೇಲೆ ನೂರಾರು ಕಾರ್ಯಕರ್ತರು ದಾಳಿ ನಡೆಸಿದ್ದರು. ಅಲ್ಲಿ ಯುವಕ ಹಾಗೂ ಯುವತಿಯರು ಅಕ್ರಮ ಲೈಂಗಿಕ ಚಟುವಟಿಕೆಯಲ್ಲಿ ಭಾಗವಹಿಸಿದ್ದರು ಎಂದು ಆರೋಪಿಸಿದ್ದರು. ಈಗ ಪ್ರಕರಣದ ತೀರ್ಪು ಹೊರ ಬಿದ್ದಿದೆ.








