‘ನಾನು ಸಿಎಂ ಹುದ್ದೆಯ ಆಕಾಂಕ್ಷಿಯಲ್ಲ, ಭವಿಷ್ಯದ ಬಗ್ಗೆ ಗೊತ್ತಿಲ್ಲ’ : ಆರ್.ಅಶೋಕ್
ಬೆಂಗಳೂರು : ‘ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಮತ್ತು ಆ ರೇಸ್ನಲ್ಲೂ ನಾನಿಲ್ಲ. ಆದರೆ, ಭವಿಷ್ಯದ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ನಿಮ್ಹಾನ್ಸ್ನಲ್ಲಿ ನಡೆದ ಕಾರ್ಯಾಗಾರವೊಂದರಲ್ಲಿ ಭಾಗವಹಿಸಿದ್ದ ಅವರು ಬಳಿಕ ಸುದ್ದಿಗಾರರ ನಾಯಕತ್ವ ಬದಲಾವಣೆ ವಿಚಾರವಾಗಿ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಆಗಬೇಕು ಎಂಬ ಆಸೆಯಲ್ಲಿರುವ ಕೆಲವರು ಖಾಲಿ ಇಲ್ಲದ ಕುರ್ಚಿಗೆ ಟವಲ್ ಹಾಕಿದ್ದಾರೆ. ಇವರು ಪಂಕ್ಚರ್ ಆದ ಮತ್ತು ಪೆಟ್ರೋಲ್ ಇಲ್ಲದ ಬಸ್ಸುಗಳನ್ನು ಹತ್ತಿದ್ದಾರೆ. ಆ ಬಸ್ಸು ಹೊರಡುವುದೇ ಇಲ್ಲ. ಹೊರಡದೇ ಇರುವ ಬಸ್ಸಿನ ಸೀಟಿಗೆ ಟವಲ್ ಹಾಕಿ ಕೂತರೇ ಪ್ರಯೋಜನವೇನು ಎಂದು ಪ್ರಶ್ನಿಸಿದರು.
ಈ ವೇಳೆ ಸುದ್ದಿಗಾರರ, ಹಾಗಿದ್ದರೆ ಬಿಜೆಪಿ ಪಂಕ್ಚರ್ ಆಗಿರುವ ಬಸ್ಸೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ‘ಬಿಜೆಪಿ ಪಂಕ್ಚರ್ ಬಸ್ ಅಲ್ಲ, ಮುಖ್ಯಮಂತ್ರಿ ಆಗಲು ಹೊರಟಿರುವವರ ಬಸ್ಸುಗಳ ಸ್ಥಿತಿ ಹೇಳಿದ್ದೇನೆ. ಯಡಿಯೂರಪ್ಪ ನಮ್ಮ ನಾಯಕರು. ಇನ್ನೆರಡೂ ವರ್ಷ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ನಾನು ಮುಖ್ಯಮಂತ್ರಿ ರೇಸ್ನಲ್ಲಿ ಇಲ್ಲ. ರೇಸ್ ಕುದುರೆ ಹಿಂದೆ ಓಡುವ ಜಾಯಮಾನವೂ ನನ್ನದಲ್ಲ’ ಎಂದರು.