ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಹಲವು ವಿಷಯಗಳ ಬಗ್ಗೆ ಸವಾಲುಗಳನ್ನು ಎಸೆದಿದ್ದಾರೆ. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪಾಕಿಸ್ತಾನ ವಿರೋಧಿ ಹೇಳಿಕೆಗಳ ಬಗ್ಗೆ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ-ಪಾಕಿಸ್ತಾನ ಪಂದ್ಯ:
ಒಳಗೊಂದು-ಹೊರಗೊಂದು ನೀತಿ
ಪ್ರದೀಪ್ ಈಶ್ವರ್ ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯದ ಬಗ್ಗೆ ಮಾತನಾಡುತ್ತಾ, ಬಿಜೆಪಿ ನಾಯಕರ ನಿಲುವನ್ನು ಪ್ರಶ್ನಿಸಿದರು. “ಪಾಕಿಸ್ತಾನಕ್ಕೆ ಹೋಗಿ” ಎಂದು ಬಾಯಿ ಬಡಿದುಕೊಳ್ಳುವ ಬಿಜೆಪಿ ನಾಯಕರಿಗೆ ನಿಜವಾದ ಧೈರ್ಯವಿದ್ದರೆ, ಭಾರತ-ಪಾಕಿಸ್ತಾನ ಪಂದ್ಯವನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಹೇಳಲಿ ಎಂದು ಸವಾಲು ಹಾಕಿದರು.
ಪಾಕಿಸ್ತಾನ ಪ್ರಧಾನಿ ಷರೀಫ್ ಅವರ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದಾಗ ಅದನ್ನು ‘ಬಾಂಧವ್ಯ ವೃದ್ಧಿ’ ಎಂದು ಹೇಳಿದ್ದ ಬಿಜೆಪಿ, ಈಗ ಪಾಕಿಸ್ತಾನದ ಬಗ್ಗೆ ಬೈಯುತ್ತಿರುವುದು ಅವರ “ಒಳಗೊಂದು-ಹೊರಗೊಂದು” ನೀತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು. ಪುಲ್ವಾಮಾ ದಾಳಿಯ ಸಂತ್ರಸ್ತರ ಮೇಲೆ ಗೌರವವಿದ್ದರೆ ಪಂದ್ಯ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ಪಂದ್ಯ ರದ್ದುಗೊಳಿಸಲಾಗುತ್ತಿಲ್ಲ, ಏಕೆಂದರೆ ಬಿಜೆಪಿಗೆ ಹಣ ಮುಖ್ಯ ಎಂದು ದೂರಿದರು.
ದಲಿತರ ಬಗ್ಗೆ ಪ್ರೀತಿ ಇದೇನಾ?
ಬಿಜೆಪಿ ನಾಯಕ ಮತ್ತು ಮಾಜಿ ಸಂಸದ ಚಲವಾದಿ ನಾರಾಯಣಸ್ವಾಮಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು. “ದಲಿತರ ಬಗ್ಗೆ ಮಾತನಾಡುವ ನಾರಾಯಣಸ್ವಾಮಿ ಅವರು ಎಐಸಿಸಿ ಅಧ್ಯಕ್ಷರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ” ಎಂದು ಖಂಡಿಸಿದರು.
ತಮ್ಮ ಕ್ಷೇತ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡ ದಲಿತ ಯುವಕನ ಕುಟುಂಬವನ್ನು ಭೇಟಿ ಮಾಡದೇ ಇರುವ ಬಿಜೆಪಿಯ ನಿಲುವನ್ನು ಪ್ರಶ್ನಿಸಿದ ಅವರು, “ನಿಮ್ಮ ದಲಿತ ಪ್ರೀತಿ ಇದೇನಾ?” ಎಂದು ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ಚಲವಾದಿ ನಾರಾಯಣಸ್ವಾಮಿ ಅವರನ್ನು “ಕೋತಿ” ಎಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿದೆ.
ಚಲವಾದಿ ನಾರಾಯಣಸ್ವಾಮಿ ಅವರು ಪ್ರದೀಪ್ ಈಶ್ವರ್ ಅವರನ್ನು ‘ನಿಮ್ಹಾನ್ಸ್’ಗೆ ಸೇರಿಸಬೇಕು ಎಂದು ಹೇಳಿದ್ದಕ್ಕೆ ಪ್ರದೀಪ್ ಈಶ್ವರ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. “ಮೊದಲು ನೀವೇ ಚಿಕಿತ್ಸೆ ಪಡೆದುಕೊಂಡು ಬನ್ನಿ. ನಿಮ್ಮೊಂದಿಗೆ ಚಿಕಿತ್ಸೆಗೆ ಮೂರು ಅಡಿ ಕಟೌಟ್ ರವಿಕುಮಾರ್, ಯತ್ನಾಳ್, ಪ್ರತಾಪ್ ಸಿಂಹ ಅವರನ್ನು ಕರೆದುಕೊಂಡು ಹೋಗಿ” ಎಂದು ಟಾಂಗ್ ಕೊಟ್ಟರು.
ಮಾತ್ರವಲ್ಲದೆ, ನಾಲ್ವರು ನಾಯಕರ ವೈಯಕ್ತಿಕ ಚಿಕಿತ್ಸೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಕೊಡಿಸುವುದಾಗಿ ವ್ಯಂಗ್ಯವಾಡಿದರು. “ನೀವು ರಾಜ್ಯದ ಸಿಎಂ ಬಗ್ಗೆ ಕೆಟ್ಟದಾಗಿ ಮಾತನಾಡಬಹುದು, ನಾನು ನಿಮ್ಮ ಬಗ್ಗೆ ಮಾತನಾಡಬಾರದಾ?” ಎಂದು ಪ್ರಶ್ನಿಸಿ, “ಕೋತಿಗಳನ್ನು ಕೋತಿ ಅಂದರೆ ತಪ್ಪಾ?” ಎಂದು ನಾರಾಯಣಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ನಾಯಕರ ಹಿಂದೂ ಧರ್ಮದ ಪ್ರೀತಿಯನ್ನು ಪ್ರದೀಪ್ ಈಶ್ವರ್ ಪ್ರಶ್ನಿಸಿದರು. ಬಡ ಅರ್ಚಕರ ಮಕ್ಕಳಿಗೆ ಸಹಾಯ ಮಾಡಲು ಯತ್ನಾಳ್ ಅವರ ಆಸ್ತಿಯಲ್ಲಿ 25% ನೀಡುವಂತೆ ಸವಾಲು ಹಾಕಿದರು. “ನಿಮ್ಮ ಬಳಿ ನೂರಾರು ಕೋಟಿ ಆಸ್ತಿ ಇದೆ. ಅರ್ಚಕರ ಮಕ್ಕಳ ಭವಿಷ್ಯಕ್ಕೆ 25% ಆಸ್ತಿ ಬರೆದುಕೊಟ್ಟರೆ, ನಾನು ನಿಮ್ಮ ಹಿಂದೂ ಧರ್ಮದ ಪ್ರೀತಿಯ ಬಗ್ಗೆ ಎಲ್ಲೂ ಮಾತನಾಡುವುದಿಲ್ಲ” ಎಂದು ಪ್ರದೀಪ್ ಈಶ್ವರ್ ಸವಾಲು ಹಾಕಿದರು.
ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ವಿವಾದಕ್ಕೆ ನಾಂದಿ ಹಾಡಿದ್ದು, ಬಿಜೆಪಿ ನಾಯಕರ ಪ್ರತಿಕ್ರಿಯೆಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.








