`ನಾನು ಬೋಗಸ್ ರಾಜಕಾರಣಿ ಅಲ್ಲ, ಯಾರಿಗೂ ಪಂಪ್ ಹೊಡೆಯಲ್ಲ’
ಬೆಂಗಳೂರು : ನಾನು ಬೋಗಸ್ ರಾಜಕಾರಣಿ ಅಲ್ಲ. ಯಾರಿಗೂ ಪಂಪ್ ಹೊಡೆಯಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾಜದ ರಣಕಹಳೆ ಮೊಳಗಿದ್ದು, ಖಡ್ಗ ಝಳಪಿಸುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಬೋಗಸ್ ರಾಜಕಾರಣಿ ಅಲ್ಲ. ಯಾರಿಗೂ ಪಂಪ್ ಹೊಡೆಯಲ್ಲ. ಮಂತ್ರಿ ಆಗಬೇಕಿಲ್ಲ, ಮಂತ್ರಿ ಅಪ್ಪ ಇದೀನಿ. ಗೃಹ ಸಚಿವ ಬೊಮ್ಮಾಯಿ ನನ್ನ ಜೊತೆ ಮಾತನಾಡಿದ್ದಾರೆ. ಬೇರೆಯವರಿಗೆ ಕೊಟ್ಟಂತೆ ನನಗೆ ಭರವಸೆ ಕೊಡಬೇಡಿ.
ಶಿಗ್ಗಾವಿಯಲ್ಲಿ 50 ಸಾವಿರ ಪಂಚಮಸಾಲಿ ಜನರಿದ್ದಾರೆ. ಭರವಸೆ ಕೊಡುವಾಗ ಎಚ್ಚರಿಕೆಯಿಂದ ಕೊಡಿ. ನಮ್ಮ ಹೋರಾಟಕ್ಕೆ ವೀರಶೈವ ಲಿಂಗಾಯತ ಎಲ್ಲಾ ಮಠಾಧೀಶರು ಬೆಂಬಲ ಕೊಟ್ಟಿದ್ದಾರೆ.
ಗುರು-ವಿರಕ್ತ ಮಠಾಧೀಶರೆಲ್ಲರೂ ಮೀಸಲಾತಿ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಸಿಸಿ ಪಾಟೀಲ ಮತ್ತು ಮುರುಗೇಶ್ ನಿರಾಣಿ ಇಬ್ಬರು ಮಂತ್ರಿಗಳಿಗೆ ನಾವು ಮನವಿ ಮಾಡುತ್ತಿದ್ದೇವೆ.
ನಾವು ಮಾರ್ಚ್ 4 ರಂದು ಧರಣಿ ಮಾಡುತ್ತೇವೆ. ಅಂದು ಅಧಿವೇಶನ ಕೂಡ ಆರಂಭವಾಗಲಿದೆ. ಅಲ್ಲಿ ನಾನು ಮತ್ತೆ ಎದ್ದು ನಿಲ್ಲುತ್ತೇನೆ. ಸಿಎಂ ಉತ್ತರ ಕೊಡಲೇಬೇಕು.
ಈ ಅಧಿವೇಶನ ಮುಗಿಯುವ ಒಳಗೆ ಘೋಷಣೆ ಮಾಡದೇ ಇದ್ದಲ್ಲಿ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೊನೆಯಲ್ಲಿ ಯತ್ನಾಳ್ ಮಾತು ಮುಗಿಸುತ್ತಿದ್ದಂತೆ ಜನರು ಮಾತು ಮುಂದುವರಿಸುವಂತೆ ಪಟ್ಟು ಹಿಡಿದರು. ಆಗ ಯತ್ನಾಳ್, ಈಗ ಮಾತನಾಡಿದ್ದು ಸಾಕು.
ಇನ್ನು ಬಹಳ ಮಾತನಾಡಿದರೆ ಪಕ್ಷದಿಂದ ಉಚ್ಛಾಟನೆ ಮಾಡಿ ನೋಟಿಸ್ ಕೊಟ್ಟು ಕಳಿಸಲಿದ್ದಾರೆ ಎಂದು ವ್ಯಂಗ್ಯವಾಡಿದರು.