ಒಂದು ರನ್ ಸೋಲು ಗೆಲುವಿನ ಲೆಕ್ಕಚಾರ…! ರಿಷಬ್ ಪಂತ್ ಗೆ ವಿರಾಟ್ ಸಮಧಾನ
ರಿಷಬ್ ಪಂತ್ .. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ನಾಯಕ. ಟೀಮ್ ಇಂಡಿಯಾದ ಭವಿಷ್ಯದ ಆಟಗಾರ. ಕಳೆದ ಆಸ್ಟ್ರೇಲಿಯಾ ಸರಣಿಯ ನಂತರ ರಿಷಬ್ ಪಂತ್ ಅವರ ವರ್ಚಸ್ಸು ಬದಲಾಗಿದೆ. ಕ್ರಿಕೆಟ್ ದಿಗ್ಗಜರು ರಿಷಬ್ ಪಂತ್ ಅವರ ಬ್ಯಾಟಿಂಗ್ ವೈಖರಿ ಮತ್ತು ಪಂದ್ಯ ಗೆಲ್ಲಿಸಿಕೊಡುವ ಸಾಮಥ್ರ್ಯಕ್ಕೆ ಉಘೆ ಉಘೇ ಅಂತಿದ್ದಾರೆ.
ಇದ್ರ ಬೆನ್ನಲ್ಲೇ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಅವಕಾಶವೂ ಸಿಕ್ಕಿತ್ತು. ಸದ್ಯ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ರೆ, ಎರಡು ಪಂದ್ಯಗಳನ್ನು ಸೋತಿದೆ.
ನಾಯಕನಾಗಿ ರಿಷಬ್ ಪಂತ್ ಬ್ಯಾಟಿಂಗ್ ನಲ್ಲಿ ಪರವಾಗಿಲ್ಲ ಅನ್ನೋ ಪ್ರದರ್ಶನವನ್ನು ನೀಡಿದ್ದಾರೆ. ಜವಾಬ್ದಾರಿಯುತವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಆದ್ರೆ ನಾಯಕನಾಗಿ ಎದುರಾಳಿ ತಂಡಕ್ಕೆ ರಣತಂತ್ರ ರೂಪಿಸುವವಲ್ಲಿ ಸ್ವಲ್ಪ ಎಡವುತ್ತಿದ್ದಾರೆ. ಅದನ್ನು ಬಿಟ್ಟು ರಿಷಬ್ ಪಂತ್ ನಾಯಕನಾಗಿ ಉತ್ತಮವಾಗಿಯೇ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಈ ನಡುವೆ ರಿಷಬ್ ಪಂತ್ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಒಂದು ರನ್ ನಿಂದ ಸೋತಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಶಿಮ್ರೋನ್ ಹೆಟ್ಮೇರ್ ಜೊತೆ ಸೇರಿಕೊಂಡು ಗೆಲ್ಲಲು ಅಸಾಧ್ಯವಾದ ಗುರಿಯನ್ನು ಬೆನ್ನಟ್ಟಿದ್ದರು. ಇನ್ನೇನೂ ಗೆಲುವು ಕೈಗೆ ಸಿಗುತ್ತೆ ಅಂದುಕೊಳ್ಳುವಷ್ಟರಲ್ಲಿ ಕೈ ಜಾರಿ ಹೋಯ್ತು. ಹೆಟ್ಮೇರ್ ಅವರನ್ನು ಹುರಿದುಂಬಿಸುತ್ತಾ ನಾಯಕನ ಆಟವನ್ನಾಡಿದ್ದು ರಿಷಬ್ ಪಂತ್ ಅವರ ಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತಿತ್ತು. ತಾಳ್ಮೆಯಿಂದಲೇ ಬ್ಯಾಟ್ ಮಾಡುತ್ತಿದ್ದ ರಿಷಬ್ ಪಂತ್ ಕೊನೆಯ ಎಸೆತವನ್ನು ಅರಿತುಕೊಳ್ಳುವಲ್ಲಿ ವಿಫಲರಾದ್ರು. ಕೊನೆಯ ಎಸೆತದಲ್ಲಿ ಐದು ರನ್ ಗಳು ಬೇಕಿದ್ದವು. ಆದ್ರೆ ರಿಷಬ್ ಪಂತ್ ಸಿಕ್ಸರ್ ಬಾರಿಸುವ ಬದಲು ಬೌಂಡರಿ ಬಾರಿಸಿದ್ರು. ಹೀಗಾಗಿ ಆರ್ ಸಿಬಿ ಒಂದು ರನ್ ನಿಂದ ಗೆಲುವಿನ ನಗೆ ಬೀರಿತ್ತು.
ಈ ಸೋಲು ಸಹಜವಾಗಿಯೇ ರಿಷಬ್ ಪಂತ್ ಅವರನ್ನು ಕಣ್ಣೀರು ಭರಿಸುವಂತೆ ಮಾಡಿತ್ತು. ಆದ್ರೂ ರಿಷಬ್ ಪಂತ್ ತೋರಿಸಿಕೊಳ್ಳಲಿಲ್ಲ. ನಿರಾಸೆ, ಬೇಸರದಿಂದಲೇ ಸೋಲನ್ನು ಒಪ್ಪಿಕೊಂಡ ರಿಷಬ್ ಪಂತ್ ಆಘಾತಕ್ಕೀಡಾಗಿದ್ರು.
ಈ ಸಮಯದಲ್ಲಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ರಿಷಬ್ ಪಂತ್ ಅವರನ್ನು ಸಮಾಧಾನಪಡಿಸಿದ್ರು. ಆದ್ರೂ ರಿಷಬ್ ಪಂತ್ ಸಮಾಧಾನಗೊಳ್ಳುವ ಸ್ಥಿತಿಯಲ್ಲಿಲ್ಲ. ಅಷ್ಟೊಂದು ಬೇಸರ, ನೋವು, ನಿರಾಸೆ ರಿಷಬ್ ಪಂತ್ ಮುಖದಲ್ಲಿ ಎದ್ದು ಕಾಣುತ್ತಿತ್ತು.
ಆದ್ರೆ ಇದು ರಿಷಬ್ ಪಂತ್ ಗೆ ಪಾಠ. ಪಂದ್ಯದಿಂದ ಪಂದ್ಯಕ್ಕೆ ಪ್ರಬುದ್ಧತೆ ಸಾಧಿಸಿಕೊಳ್ಳುತ್ತಿರುವ ರಿಷಬ್ ಪಂತ್ ಈ ಸೋಲನ್ನು ಮರೆಯಲೇಬೇಕು. ಇದೇ ಗುಂಗಿನಲ್ಲಿದ್ರೆ ಮುಂದಿನ ಹಾದಿ ಕಷ್ಟ ಕಷ್ಟ.. ಆಟ ಅಂದ ಮೇಲೆ ಸೋಲು ಗೆಲುವು ಇದ್ದದ್ದೇ. ಇದು ರಿಷಬ್ ಪಂತ್ ಗೂ ಗೊತ್ತು. ಹೀಗಾಗಿ ರಿಷಬ್ ಪಂತ್ ಆರ್ ಸಿಬಿ ವಿರುದ್ಧದ ಸೋಲನ್ನು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ. ಸೇಡು ತೀರಿಸಿಕೊಳ್ಳಲು ಇನ್ನೊಂದು ಪಂದ್ಯವಿದೆ.
ಒಟ್ಟಿನಲ್ಲಿ ರಿಷಬ್ ಪಂತ್ ತಪ್ಪು ಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯಕ್ಕೆ ತಯಾರಿ ನಡೆಸಿಕೊಳ್ಳಬೇಕು