RCB | ಆರ್ ಸಿಬಿ ಸೋಲಿಗೆ ಕಾರಣಗಳೇನು..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಮೂರು ಸೋಲುಗಳೊಂದಿಗೆ ಪ್ಲೇ ಆಫ್ಸ್ ಹಾದಿಯಿಂದ ದೂರ ಸರಿಯುತ್ತಿದೆ.
ಮುಂಬೈನ ಬ್ರೆಬೊರ್ನ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್ ಸಿಬಿ ಆರು ವಿಕೆಟ್ ಗಳಿಂದ ಸೋಲು ಕಂಡಿದೆ.
ಇದು ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿಗೆ ಐದನೇ ಸೋಲು ಹಾಗೇ ಹ್ಯಾಟ್ರಿಕ್ ಪರಾಜಯ.
ಹಾಗಾದ್ರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಲು ಕಾರಣವೇನು..?
ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಬೆಂಗಳೂರು ತಂಡ ಪಂದ್ಯ ಸೋತಿದ್ದು ಯಾಕೆ..?
ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದ್ರೆ ಮೊದಲಿಗೆ ಸಿಗುವ ಕಾರಣ ಪವರ್ ಪ್ಲೇ..!!
ಹೌದು..!
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು 170 ರನ್ ಗಳಿಸಿತ್ತು.
ಇದು ಉತ್ತಮ ಮೊತ್ತ ಆಗಿದ್ದರೂ ಗುಜರಾತ್ ನಂತಹ ಬಲಿಷ್ಠ ತಂಡದ ಎದುರು ಸೆಣಸಾಡುವಾಗ 190 ರನ್ ಸೇಫ್ ಆಗಿರುತ್ತದೆ.
190 ರನ್ ಗಳಿಸಿದ್ದಾಗ ಎದುರಾಳಿಗಳ ಮೇಲೆ ಒತ್ತಡ ಹಾಕಬಹುದು.
ಇದಕ್ಕೆ ಅಡಿಪಾಯ ಹಾಕಬೇಕಾಗಿದ್ದದ್ದು ಪವರ್ ಪ್ಲೇ ನಲ್ಲಿ. ಆದ್ರೆ ಆರ್ ಸಿಬಿ ಪವರ್ ಪ್ಲೇನಲ್ಲಿ ರನ್ ಗಳಿಸೋದಿರಲಿ, ವಿಕೆಟ್ ಉಳಿಸಿಕೊಂಡರೇ ಸಾಕು ಎಂಬಂತಾಗಿದೆ.

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಬೆಂಗಳೂರು ತಂಡ ಪವರ್ ಪ್ಲೇ ನಲ್ಲಿ ಪವರ್ ಕಳೆದುಕೊಂಡಿತು.
ನಂತರ ವಿರಾಟ್ – ಪಟಿದಾರ್ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಒಂದು ಹಂತದಲ್ಲಿ ಆರ್ ಸಿಬಿ 190ರ ಗಡಿ ದಾಡೋದು ಕಷ್ಟವೇನು ಅನಿಸಲಿಲ್ಲ.
ಆದ್ರೆ ಪಟಿದಾರ್ ವಿಕೆಟ್ ಬಿದ್ದ ಬಳಿಕ ಆರ್ ಸಿಬಿಯ ರನ್ ರೇಟ್ ಕಡಿಮೆ ಆಯ್ತು. ಮ್ಯಾಕ್ಸಿ ರನ್ ಗಳಿಸಲೂ ಟೈಂ ತೆಗೆದುಕೊಂಡರು.
ವಿರಾಟ್ ಗೆ ಕೂಡ ಸ್ಟ್ರೈಕ್ ಸಿಗಲಿಲ್ಲ. ಜೊತೆಗೆ ನಿರ್ಣಾಯಕ ಹಂತದಲ್ಲಿ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ವಿಕೆಟ್ ಕಳೆದುಕೊಂಡಿದ್ದು, ಆರ್ ಸಿಬಿಯ ರನ್ ಬೇಗಕ್ಕೆ ಬ್ರೇಕ್ ಬಿದ್ದಂತೆ ಆಯ್ತು.
ಕೊನೆಯ ಓವರ್ ಗಳಲ್ಲಿ ಆರ್ ಸಿಬಿ ಬ್ಯಾಟರ್ ಗಳು ಅಬ್ಬರಿಸದೇ ಇದ್ದದ್ದೂ ಕೂಡ ತಂಡಕ್ಕೆ ಹಿನ್ನಡೆಯಾಯ್ತು.
ಇನ್ನು ಬೌಲಿಂಗ್ ನಲ್ಲೂ ಕೂಡ ಆರಂಭದಿಂದಲೇ ಗುಜರಾತ್ ಬ್ಯಾಟರ್ ಗಳ ಮೇಲೆ ಒತ್ತಡ ಹಾಕುವಲ್ಲಿ ಬೆಂಗಳೂರು ಬೌಲರ್ ಗಳು ವಿಫಲರಾದರು.
ಮುಖ್ಯವಾಗಿ ಪವರ್ ಪ್ಲೇ ನಲ್ಲಿ ರನ್ ಗಳನ್ನು ಕೊಟ್ಟಿದ್ದು, ಜೊತೆಗೆ ವಿಕೆಟ್ ಪಡೆಯದೇ ಇದ್ದದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ.
ಒಂದು ಹಂತದಲ್ಲಿ ಸಹಾ, ಗಿಲ್, ಹಾರ್ದಿಕ್ ಪಾಂಡ್ಯ ವಿಕೆಟ್ ಗಳು ಬ್ಯಾಕ್ ಟು ಬ್ಯಾಕ್ ಪಡೆದುಕೊಂಡಾಗ ಗುಜರಾತ್ ಮೇಲೆ ಇನ್ನಷ್ಟು ಒತ್ತಡ ಹೇರಬಹುದಾಗಿತ್ತು.
ಆದ್ರೆ ಈ ಅವಕಾಶವನ್ನೂ ಕೂಡ ಆರ್ ಸಿಬಿ ಬೌಲರ್ ಗಳು ಬಳಸಿಕೊಳ್ಳಲಿಲ್ಲ.
ಈ ಎಲ್ಲಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡಿದೆ.








