ಯುಎಇ ಐಪಿಎಲ್ ಟೂರ್ನಿಯಿಂದ ಹೊರ ನಡೆದ ಈ ಐವರು ಕ್ರಿಕೆಟಿರು…!
2020ರ ಐಪಿಎಲ್ ಟೂರ್ನಿ ಯುಎಇನಲ್ಲಿ ಸೆಪ್ಟಂಬರ್ 19ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ಈಗಾಗಲೇ ಎಂಟೂ ಫ್ರಾಂಚೈಸಿಗಳ ಆಟಗಾರರು ಯುಎಇನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋವಿಡ್ ಆತಂಕದಿಂದ ಹೊರಬಂದಿದೆ. ಆದ್ರೆ ತಂಡದ ಪ್ರಮುಖ ಇಬ್ಬರು ಆಟಗಾರರು ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಹಾಗೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲಿ ತಲಾ ಒಬ್ಬೊಬ್ಬ ಆಟಗಾರ ಟೂರ್ನಿಗೆ ಲಭ್ಯವಿರುವುದಿಲ್ಲ. ಈಗಾಗಲೇ ಈ ಮೂರು ತಂಡಗಳು ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಆದ್ರೆ ಸಿಎಸ್ಕೆ ತಂಡ ಇನ್ನೂ ಕೂಡ ಬದಲಿ ಆಟಗಾರರನ್ನು ಆಯ್ಕೆ ಮಾಡಿಕೊಂಡಿಲ್ಲ.
ಸುರೇಶ್ ರೈನಾ– ಖುಷಿ ಖುಷಿಯಾಗಿ ಯುಎಇಗೆ ಸಿಎಸ್ಕೆ ತಂಡದೊಂದಿಗೆ ಹೋಗಿದ್ದ ಸುರೇಶ್ ರೈನಾ, ಸಡನ್ ಆಗಿ ತಂಡದಿಂದ ಹೊರನಡೆದಿದ್ದರು. ತನ್ನ ಸೋದರ ಅತ್ತೆಯ ಕುಟುಂಬದ ಮೇಲೆ ಅನಾಮಿಕರು ದಾಳಿ ನಡೆಸಿದ್ದರು ಎಂಬ ಕಾರಣ ನೀಡಿ ಟೂರ್ನಿಯಿಂದ ಹೊರಬಂದ ಸುರೇಶ್ ರೈನಾ ಈಗ ಮತ್ತೆ ತಂಡವನ್ನು ಸೇರಿಸಿಕೊಳ್ಳುವ ಇಚ್ಚೆಯನ್ನು ವ್ಯಕ್ತಪಡಿಸಿದ್ದಾರೆ. ಆದ್ರೆ ಸುರೇಶ್ ರೈನಾ ತಂಡದಿಂದ ಹೊರನಡೆದಾಗ ಸಿಎಸ್ಕೆ ಮಾಲೀಕ ಎನ್. ಶ್ರೀನಿವಾಸನ್ ಅವರು ಕಿಡಿಕಾರಿದ್ದರು. ಆಮೇಲೆ ಶಾಂತವಾಗಿದ್ರೂ ಸುರೇಶ್ ರೈನಾ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ರೈನಾಗೆ ಬದಲಿ ಆಟಗಾರನನ್ನು ಆಯ್ಕೆ ಮಾಡಿಲ್ಲ.
ಹರ್ಭಜನ್ ಸಿಂಗ್
ಸಿಎಸ್ಕೆ ತಂಡಕ್ಕೆ ಮತ್ತೊಂದು ಹಿನ್ನೆಡೆಯಾಗಿದೆ. ಮೊದಲೇ ಕೋವಿಡ್ ಮತ್ತು ರೈನಾ ಘಟನೆಯಿಂದ ಕಂಗೆಟ್ಟಿದ್ದ ಸಿಎಸ್ಕೆ ತಂಡಕ್ಕೆ ಆಘಾತ ನೀಡಿದ್ದು ಟರ್ಬನೇಟರ್ ಹರ್ಭಜನ್ ಸಿಂಗ್. ಕೊನೆಯ ಕ್ಷಣದಲ್ಲಿ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ಹೊರನಡೆದಿದ್ದಾರೆ. ಹರ್ಭಜನ್ ಸಿಂಗ್ ಬದಲಿ ಆಟಗಾರರನ್ನು ಸಿಎಸ್ಕೆ ಆಯ್ಕೆ ಮಾಡಿಕೊಂಡಿಲ್ಲ. ಆದ್ರೆ, ತಂಡದಲ್ಲಿ ಇಮ್ರಾನ್ ತಾಹೀರ್, ಮಿಟ್ಚೆಲ್ ಸ್ಯಾಂಟ್ನರ್ ಮತ್ತು ಪಿಯೂಷ್ ಚಾವ್ಲಾ ಸೇರಿ ಮೂವರು ಸ್ಪಿನ್ನರ್ಗಳಿದ್ದಾರೆ.
ಜೇಸನ್ ರಾಯ್
ಜೇಸನ್ ರಾಯ್.. ಇಂಗ್ಲೆಂಡ್ ನ ಆರಂಭಿಕ ಆಟಗಾರ. ಡೆಲ್ಲಿ ಕ್ಯಾಪಿಟಲ್ಸ್ ತಂಡ 1.5 ಕೋಟಿ ರೂಪಾಯಿ ಕೊಟ್ಟು ಜೇಸನ್ ರಾಯ್ ಅವರನ್ನು ಖರೀದಿ ಮಾಡಿತ್ತು.ಆದ್ರೆ ಇತ್ತೀಚೆಗೆ ಅಭ್ಯಾಸದ ವೇಳೆ ಜೇಸನ್ ರಾಯ್ ಅವರು ಗಾಯಗೊಂಡಿದ್ದರು. ಹೀಗಾಗಿ ಅವರು ಪಾಕ್ ವಿರುದ್ಧದ ಟಿ-ಟ್ವೆಂಟಿ ಸರಣಿಯಿಂದ ಹೊರನಡೆದಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಸ್ಟ್ರೇಲಿಯಾದ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರನ್ನು ಆಯ್ಕೆ ಮಾಡಿಕೊಂಡಿದೆ.
ಕಾನೆ ರಿಚಡ್ಸನ್
ಕಾನೆ ರಿಚಡ್ಸನ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗದ ಬೌಲರ್. ಆಸ್ಟ್ರೇಲಿಯಾದ ವೇಗ ದೂತನಾಗಿರುವ ಕಾನೆ ರಿಚಡ್ರ್ಸನ್ ಅವರನ್ನು ನಾಲ್ಕು ಕೋಟಿ ರೂಪಾಯಿಗೆ ಆರ್ಸಿಬಿ ಖರೀದಿ ಮಾಡಿತ್ತು. ಆದ್ರೆ ವೈಯಕ್ತಿಕ ಕಾರಣ ನೀಡಿ ಟೂರ್ನಿಯಿಂದ ತಪ್ಪಿಸಿಕೊಂಡಿದ್ದಾರೆ. ಅವರ ಬದಲಿಗೆ ಆಡಮ್ ಝಾಂಪಾ ಅವರು ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದಾರೆ.
ಲಸಿತ್ ಮಾಲಿಂಗಾ..
ಲಸಿತ್ ಮಾಲಿಂಗಾ… ಮುಂಬೈ ಇಂಡಿಯನ್ಸ್ ತಂಡದ ಖಾಯಂ ವೇಗಿ. ಶ್ರೀಲಂಕಾದ ವೇಗದ ಬೌಲರ್ ಆಗಿರುವ ಲಸಿತ್ ಮಾಲಿಂಗಾ ಅವರು ಐಪಿಎಲ್ ಟೂರ್ನಿಯ ಯಶಸ್ವಿ ಬೌಲರ್. ಆದ್ರೆ ವೈಯಕ್ತಿಕ ಕಾರಣ ನೀಡಿ ಈ ಬಾರಿಯ ಟೂರ್ನಿಯಲ್ಲಿ ಆಡುತ್ತಿಲ್ಲ. ಲಸಿತ್ ಮಾಲಿಂಗಾ ಬದಲು ಮುಂಬೈ ಇಂಡಿಯನ್ಸ್ ತಂಡ ಆಸ್ಟ್ರೇಲಿಯಾದ ವೇಗಿ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ಆಯ್ಕೆ ಮಾಡಿಕೊಂಡಿದೆ.